ತುಮಕೂರು: ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಿಗದಿಯಾದರೆ, ಕಾಣದ ಕೈಗಳು ಕೆಲಸ ಶುರು ಮಾಡುತ್ತವೆ. ನಾನು ಎಲ್ಲಿ ನಿಲ್ಲಬೇಕು ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ ಎಂದು ತುಮಕೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರು-ಚಾಮರಾಜದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕ್ಲಿಯರ್ ಆಗಿ ಹೇಳುತ್ತೇನೆ, ಯಾವುದೇ ಗೊಂದಲ ಮಾಡೋದು ಬೇಡ. ಚಾಮರಾಜದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಿರಿಯ ನಾಯಕರಿದ್ದಾರೆ. ಯಾವುದೇ ಕ್ಷೇತ್ರಕ್ಕೆ ಮೂಗು ತೂರಿಸುವ ವ್ಯಕ್ತಿತ್ವ ನನ್ನದಲ್ಲ ಎಂದು ಒತ್ತಿ ಹೇಳಿದರು.
ಸುದ್ದಿ ಆಗಬೇಕು ಎಂದು ನನ್ನ ಹೆಸರನ್ನು ತರುವುದು ಬೇಡ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಹೊರತು ಚಾಮರಾಜ ಅಥವಾ ಬೇರೆ ಕಡೆ ಸ್ಪರ್ಧಿಸಬೇಕು ಎಂಬ ಯೋಚನೆ ಇಲ್ಲ ಎಂದರು.
ಲೋಕಾಯುಕ್ತ ಪೊಲೀಸರ ಟ್ರ್ಯಾಪ್ ವಿಚಾರಕ್ಕೆ ಮಾತನಾಡಿದ ಅವರು, ಲೋಕಾಯುಕ್ತದವರು ದಿಟ್ಟವಾದಂತಹ ಹೆಜ್ಜೆ ಇಟ್ಟಿದ್ದಾರೆ. ಅದನ್ನೆಲ್ಲಾ ನಾವು ಮೆಚ್ಚಿ ಕೊಳ್ಳಬೇಕಾಗುತ್ತೆ. ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಕುರಿತಾಗಿ ದೊಡ್ಡ ಮಟ್ಟದ ಹಗರಣ ನಡೆದಿದೆ. ಅಬಕಾರಿ ಇಲಾಖೆಯ ಅನ್ಯಾಯ, ಅಕ್ರಮ, ದೌರ್ಜನ್ಯ ಮಿತಿಮೀರಿದೆ ಎಂದು ಹೇಳಿದರು.
ಮದ್ಯ ಮಾರಾಟ ಸಂಘದ ರಾಜ್ಯಾಧ್ಯಕ್ಷರು ಅಸಹಾಯಕತೆಯನ್ನ ಹೊರಹಾಕಿದ್ದಾರೆ. ವಿಪರ್ಯಾಸ ಅಂದರೆ ಆ ಅಧ್ಯಕ್ಷ ಮುಖ್ಯಮಂತ್ರಿಗಳ ವರುಣಾ ಕ್ಷೇತ್ರಕ್ಕೆ ಸೇರಿರುವ ವ್ಯಕ್ತಿ. ಅಬಕಾರಿ ಇಲಾಖೆಯಲ್ಲಾಗುತ್ತಿರುವ ಅನ್ಯಾಯ, ಅಕ್ರಮ, ದೌರ್ಜನ್ಯಗಳ ಬಗ್ಗೆ ಹೇಳಿದ್ರೂ ಕ್ಯಾರೆ ಅಂದಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಸೇರಿದಂತೆ ಎಲ್ಲವನ್ನೂ ತಿಂದು ಜೀರ್ಣಿಸಿಕೊಂಡು ಮೆಟ್ಟಿ ನಿಲ್ಲುತ್ತೇವೆ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇದು ಬಹಳ ದಿನ ನಡೆಯೋದಿಲ್ಲ. ಈ ಸರ್ಕಾರದ ವಿರುದ್ಧ ಅತಿ ಶೀಘ್ರದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Laxmi News 24×7