ಬೆಳಗಾವಿ: ಕಳೆದ ಮೂರು ದಿನಗಳಿಂದ ಚಳಿಗಾಲ ಅಧಿವೇಶನ ಸುಗಮವಾಗಿ ನಡೆಸಲು ಶ್ರಮಿಸುತ್ತಿರುವ ಸ್ಪೀಕರ್ ಯು. ಟಿ. ಖಾದರ್ ಅವರು ಇಂದು ಬೆಳಗ್ಗೆ ಗೋಲಿ, ಲಗೋರಿ ಸೇರಿ ಬಾಲ್ಯದ ಕ್ರೀಡೆಗಳನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಬೆಳಗಾವಿ ನಗರದ ಟಿಳಕವಾಡಿಯ ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಾಲ್ಯದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಗೋಲಿ ಆಡುವ ಮೂಲಕ ಸ್ಪೀಕರ್ ಯು. ಟಿ. ಖಾದರ್ ಚಾಲನೆ ನೀಡಿದರು. ಗೋಲಿ, ಬುಗುರಿ, ಸೈಕಲ್ ಟೈರ್ ಓಡಿಸುವುದು, ಬಂಡಿ ಓಡಿಸುವುದು, ಚಿನ್ನಿ ದಾಂಡು ಆಟ, ಲಗೋರಿ ಸೇರಿದಂತೆ ಬಾಲ್ಯದ ಅನೇಕ ಆಟಗಳನ್ನು ಏರ್ಪಡಿಸಲಾಗಿತ್ತು.
ಈ ಎಲ್ಲಾ ಆಟಗಳನ್ನು ಆಡಿ ಸ್ಪೀಕರ್ ಯು. ಟಿ. ಖಾದರ್ ಸಖತ್ ಎಂಜಾಯ್ ಮಾಡಿದರು. ಅಲ್ಲಿ ನೆರೆದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ವೇಳೆ ಸ್ಪೀಕರ್ ಜೊತೆಗೆ ಶಾಸಕರಾದ ಅಭಯ್ ಪಾಟೀಲ, ಸಿದ್ದು ಸವದಿ, ಮೇಯರ್ ಮಂಗೇಶ ಪವಾರ ಸೇರಿ ಮತ್ತಿತರರು ಕೂಡ ಸಾಥ್ ಕೊಟ್ಟರು. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಮೈಮರೆತು ಇವರೆಲ್ಲಾ ಆಟ ಆಡಿದ್ದು ಅವರನ್ನು ಬಾಲ್ಯದ ದಿನಗಳಿಗೆ ಕರೆದೊಯ್ದಿತ್ತು.
ಬಳಿಕ ಈ ಕುರಿತು ಮಾತನಾಡಿದ ಸ್ಪೀಕರ್ ಯು. ಟಿ. ಖಾದರ್ ಅವರು, ಇಂದಿನ ಮೊಬೈಲ್, ಡಿಜಿಟಲ್ ಯುಗದಲ್ಲಿ ಇಂಥ ಆಟಗಳು ಕಣ್ಮರೆಯಾಗಿವೆ. ಶಾಸಕ ಅಭಯ್ ಪಾಟೀಲ ಅವುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಾವೆಲ್ಲಾ ಬಾಲ್ಯದಲ್ಲಿ ಇಂಥಹ ಆಟಗಳನ್ನು ಆಡಿಯೇ ಬೆಳೆದಿದ್ದೇವೆ. ಈಗಿನ ಬಾಲಕರು ಚಿನ್ನಿ ದಾಂಡು, ಲಗೋರಿ ಸೇರಿ ಮತ್ತಿತರ ಆಟಗಳನ್ನು ಆಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
Laxmi News 24×7