ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿನ ವಿಧಾನಪರಿಷತ್ನಲ್ಲಿ ನಡೆಯುತ್ತಿದ್ದ ಗಂಭೀರ ಚರ್ಚೆ ಮಧ್ಯೆ ಕುರ್ಚಿ ಪ್ರಸಂಗವು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಯಾವಾಗ ತುಂಬುತ್ತೀರಿ? ಎಂದು ಮೇಲ್ಮನೆ ಸದಸ್ಯ ನಿರಾಣಿ ಹಣಮಂತ ರುದ್ರಪ್ಪ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಎದ್ದು ನಿಂತು ಉತ್ತರಿಸುತ್ತಿದ್ದಂತೆ, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿವಲ್ಲ ಎಂದು ಪರಿಷತ್ ಕಾರ್ಯದರ್ಶಿಗೆ ಪ್ರಶ್ನಿಸಿದರು.
ಸಿಬ್ಬಂದಿಯಿಂದ ಕುರ್ಚಿಯನ್ನ ಸರಿಪಡಿಸಿಕೊಂಡು ಮಾತನಾಡಲು ಆರಂಭಿಸುತ್ತಿದ್ದಂತೆ, ಸದಸ್ಯ ಭೋಜೇಗೌಡ ಅವರು ಮುಖ್ಯಮಂತ್ರಿ ಅವರ ಚೇರ್ ಈ ತರ ಮಾಡಿದ್ದೀರಲ್ಲ ಎಂದು ಕಾಲೆಳೆದರು. ತೊಂದರೆಯಾದಾಗ ತೊಂದರೆಯಾಯಿತು ಎಂದು ಹೇಳಬೇಕು. ಈಗ ಕುರ್ಚಿ ಸರಿಹೋಯಿತು ಎಂದು ನಗುತ್ತಲೇ ಸಿಎಂ ಟಾಂಗ್ ನೀಡಿದರು.
ವಿಪಕ್ಷ ಸದಸ್ಯ ಯಾಕೋ ನಿಮ್ಮ ಚೇರ್ ಅತಂತ್ರವಾಗಿದೆ ಎಂದು ಮತ್ತೆ ಕಾಲೆಳೆದರು. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇದಕ್ಕೆ ಧ್ವನಿಗೂಡಿಸಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ನನ್ನ ಚೇರ್ ಅತಂತ್ರದಲ್ಲಿಲ್ಲ. ನಿಮ್ಮ ಚೇರ್ ಗಟ್ಟಿಯಾಗಿದೆಯಾ ನೋಡಿಕೊಳ್ಳಿ. ನನ್ನ ಚೇರ್ ಗಟ್ಟಿಯಾಗಿದೆ ನಯವಾಗಿ ತಿರುಗೇಟು ನೀಡಿದರು.
ನನ್ನ ಕುರ್ಚಿಯೂ ಸರಿಯಿಲ್ಲ – ಸಭಾಪತಿ ಹೊರಟ್ಟಿ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಮಯ ನೀಡಿಲ್ಲ ಅಂತ ಆಕ್ಷೇಪದ ವೇಳೆ ಮತ್ತೆ ಚೇರ್ ಬಗ್ಗೆ ಅನೇಕರು ಪ್ರಸ್ತಾಪಿಸಿದರು. ಮೊದಲಿಗೆ ವಿಪಕ್ಷ ಸದಸ್ಯ ಶಶಿಲ್ ಜಿ ನಮೋಶಿ, ಈ ಚೇರ್ ಸರಿಯಾಗಿಲ್ಲ. ಕುಳಿತುಕೊಂಡು ಬರೆಯುವುದಕ್ಕೆ ಆಗುತ್ತಿಲ್ಲ ಎಂದು ಎದ್ದು ನಿಂತು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನನ್ನ ಕುರ್ಚಿ ಸರಿಯಿಲ್ಲ ಎಂದರು. ನಿಮ್ಮ ಕುರ್ಚಿಗೆ ತೊಂದರೆಯಿಲ್ಲ ಎಂದು ರವಿಕುಮಾರ್ ಮಾರ್ಮಿಕವಾಗಿ ತಿಳಿಸಿದರು. ಇಲ್ಲಿ ಕುರ್ಚಿ ಇರುವುದು ಕುಳಿತುಕೊಂಡು ಸದನಕ್ಕೆ ಕೇಳುವುದಕ್ಕೆ ಹೊರತು, ಬರೆಯುವುದಕ್ಕಾಗಿ ಅಲ್ಲ, ಕುಳಿತುಕೊಂಡು ಆರಾಮ ಕಾಲು ಚಾಚಿಕೊಂಡು ಇರುವಂತೆ ಮಾಡಿದ್ದು ಎಂದು ಸದಸ್ಯ ಭೋಜೇಗೌಡ ತಿಳಿ ಹೇಳುವ ಪ್ರಯತ್ನ ಮಾಡಿದರು.
ಇದಕ್ಕೆ ಸ್ಪಷ್ಟನೆ ನೀಡಿದ ನಮೋಶಿ, ನಾವು ಕುಳ್ಳಕೆ ಇದ್ದೇವೆ. ಕಾಲು ಚಾಚೋದಕ್ಕೆ ಆಗುವುದಿಲ್ಲ, ಸೊಂಟ ನೋವು ಬರುತ್ತೆ ಎಂದರು. ಆಗ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಧ್ಯಪ್ರವೇಶಿಸಿ, ಪ್ರತಿಯೊಬ್ಬರ ಕಾಲುಗಳ ಎತ್ತರ ನೋಡಿಕೊಂಡು ಸೀಟು ಮಾಡಿಸಬೇಕಿದೆ ಎಂದು ಹಾಸ್ಯ ಮಾಡಿದರು.
ಸಭಾಪತಿ ಹೊರಟ್ಟಿ ಚೇರ್ ಸರಿಪಪಡಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ, ಮುಂದಿನ ಅಧಿವೇಶನದೊಳಗೆ ಸರಿಪಡಿಸುವಂತೆ ಸಭಾನಾಯಕರಿಗೆ ತಿಳಿಸುವ ಮೂಲಕ ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.
Laxmi News 24×7