ಮೈಸೂರು: ಒಂದು ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಹಾಗೂ ಲೇವಾದೇವಿ ಉದ್ಯಮಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸುವ ಮೂಲಕ ಅಪಹರಿಸಿದ್ದ ಐವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಮೈಸೂರಿನ ವಿಜಯ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆದ ಏಳು ಗಂಟೆಯ ಅವಧಿಯಲ್ಲಿಯೇ ಉದ್ಯಮಿಯನ್ನು ಅಪಹರಿಸಿದ್ದ ಐವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಪಹರಣ ಕೃತ್ಯಕ್ಕೆ ಪರಿಚಿತನೇ ಮಾಸ್ಟರ್ ಮೈಂಡ್ ಎಂಬುದು ತಿಳಿದು ಬಂದಿದೆ. ಮೂಲತಃ ಬೆಳವಾಡಿ ಗ್ರಾಮದವರಾದ ಹಾಲಿ ವಿಜಯ ನಗರ ನಾಲ್ಕನೇ ಹಂತದ ನಿವಾಸಿಯಾಗಿರುವ ಉದ್ಯಮಿ ಲೋಕೇಶ್ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅದೇ ಬೆಳವಾಡಿ ಗ್ರಾಮದ ಅಪಹರಣಕಾರರಾದ ಹೆಚ್.ಎಂ. ಸಂತೋಷ್, ಹೆಚ್.ಎಸ್. ಅಭಿಷೇಕ್, ಆರ್. ಪ್ರಜ್ವಲ್, ಬಿ.ಎನ್. ದರ್ಶನ್, ಪ್ರೀತಮ್ ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಘಟನೆ: ಬೆಳವಾಡಿ ಗ್ರಾಮದ ಸಂತೋಷ್ ಪೇಂಟರ್ ಕೆಲಸ ಮಾಡಿಕೊಂಡಿದ್ದು, ಉದ್ಯಮಿ ಲೋಕೇಶ್ಗೆ ಪರಿಚಿತನಾಗಿದ್ದ, ಈತನ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ತಿಳಿದಿದ್ದ. ಈತನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂಬ ಕೆಟ್ಟ ಆಲೋಚನೆಯಿಂದ ಸಂಚು ರೂಪಿಸಿದ್ದಾನೆ. ಇದಕ್ಕೆ ಆತನ ಸ್ನೇಹಿತರು ಸಾಥ್ ನೀಡಿದ್ದಾರೆ. ಅಪಹರಣಕ್ಕಾಗಿ ಕಾರೊಂದನ್ನು ವ್ಯವಸ್ಥೆ ಮಾಡಿಕೊಂಡಿದ್ದರು. ನಿತ್ಯ ಲೋಕೇಶ್ನ ಚಲನವಲನದ ಮೇಲೆ ನಿಗಾ ಇರಿಸಿದ್ದ ಸಂತೋಷ್ ಮತ್ತು ತಂಡದವರು ಶನಿವಾರ ಸಂಜೆ ವಿಜಯ ನಗರದ ಬಳಿಯ ಕ್ಲಬ್ನಿಂದ ಲೋಕೇಶ್ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಹಿಂಬಾಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7