ಬೆಂಗಳೂರು : ವಿಶೇಷ ಚೇತನರಿಗೆ ಸುಲಭವಾಗಿ ವಿಮಾನ ಏರಲು ಸಹಕಾರಿಯಾಗಲು “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಭಾರತದಲ್ಲೇ ಮೊದಲ ಬಾರಿಗೆ “ಮೊಬಿಲಿಟಿ ಅಸಿಸ್ಟ್” ಸಾಧನ ಪರಿಚಯಿಸಿದೆ. ಇದರ ಮೂಲಕ ಕೆಐಎಎಲ್ ಮೊಬಿಲಿಟಿ ಅಸಿಸ್ಟ್ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ.
ಮಕ್ಕಳು ಸೇರಿದಂತೆ ಪ್ರಯಾಣದ ವೇಳೆ ಹೆಚ್ಚಿನ ಸಹಾಯದ ಅಗತ್ಯವಿರುವವರು, ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುರಕ್ಷಿತ, ಸುಗಮವಾಗಿ ವಿಮಾನದ ಬೋರ್ಡಿಂಗ್ ಮಾಡಲು ಮತ್ತು ವಿಮಾನದಿಂದ ಇಳಿಯಲು ಅತ್ಯಾಧುನಿಕವಾಗಿ ಬೆಂಬಲ ನೀಡುವ ವ್ಯವಸ್ಥೆಯಾಗಿ ಇದು ಕಾರ್ಯ ನಿರ್ವಹಿಸಲಿದೆ. ಹೆಚ್ಸಿಜಿ ಸಂಸ್ಥಾಪಕ ಡಾ. ಬಿ. ಎಸ್. ಅಜಯ್ಕುಮಾರ್ ಅವರು ತಮ್ಮ ಮಗ ಆದರ್ಶ್ ಅಜಯ್ಕುಮಾರ್ ಅವರ ಸ್ಮರಣಾರ್ಥ ಈ ಸಾಧನವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.ಡಚೆನ್ ಸ್ನಾಯು ಕ್ಷೀಣತೆ ಹೊಂದಿದ್ದ ಹಾಗೂ ವಿದ್ಯುತ್ ವೀಲ್ಚೇರ್ ಬಳಸುತ್ತಿದ್ದ ಆದರ್ಶ್, ವಿಮಾನ ನಿಲ್ದಾಣಗಳಲ್ಲಿ ಸೂಕ್ತ ರೀತಿಯಲ್ಲಿ ಇಳಿಯಲು ಹಾಗೂ ತಾನು ತಲುಪಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಒತ್ತಡ ಅನುಭವಿಸಿದ್ದರು. ಇವರ ಈ ವೈಯಕ್ತಿಕ ಅನುಭವವೇ ಇತರರಿಗೆ ನೆರವಾಗಲು ಸ್ಫೂರ್ತಿಯಾಯಿತು. ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು ಈ ಅತ್ಯಾಧುನಿಕ ಉಪಕರಣದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆರಳಬಹುದು.
Laxmi News 24×7