ಬೆಂಗಳೂರು : ಮನೆ ಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತನ್ನ ವಿರುದ್ಧದ ಆರೋಪದ ಸಂಬಂಧ ತನಿಖೆಗೆ ಅಸಹಕಾರ ತೋರಿದ್ದಲ್ಲದೆ, ವಿದೇಶಕ್ಕೆ ಪರಾರಿಯಾಗಿದ್ದೂ ಅಲ್ಲದೇ, ಸುಮಾರು 10-12 ಬಾರಿ ವಿಚಾರಣೆ ತಡೆಯಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಜಾಮೀನಿಗೆ ಅನರ್ಹರು ಎಂದು ವಿಶೇಷ ತನಿಖಾ ದಳ(ಎಸ್ಐಟಿ) ಹೈಕೋರ್ಟ್ಗೆ ತಿಳಿಸಿದೆ.
ಜೀವನ ಪರ್ಯಾಂತ ಸೆರೆವಾಸ ಶಿಕ್ಷೆ ರದ್ದು ಹಾಗೂ ಜಾಮೀನು ನೀಡಬೇಕೆಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್. ಮುದ್ಗಲ್ ಮತ್ತು ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಎಸ್ಐಟಿ ಪರ ವಾದ ಮಂಡಿಸಿದ ಎಸ್ಪಿಪಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಪ್ರಜ್ವಲ್ 10-12 ಬಾರಿ ಪ್ರಯತ್ನ ಮಾಡಿದ್ದಾರೆ. ಪ್ರಜ್ವಲ್ ಕೋರಿಕೆಯ ಮೇರೆಗೆ ಹಲವು ಸಲ ವಿಚಾರಣೆ ಮುಂದೂಡಲ್ಪಟ್ಟಿದೆ. ಅದಕ್ಕೂ ಮುನ್ನ, ಕೃತ್ಯ ನಡೆಸಿ ದೇಶ ತೊರೆದಿದ್ದ ಪ್ರಜ್ವಲ್ ತನಿಖೆಗೂ ತೊಂದರೆ ಮಾಡಿದ್ದರು. ಸಂತ್ರಸ್ತೆಯರ ಜೊತೆಗಿನ ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್ ಅನ್ನು ಪ್ರಜ್ವಲ್ ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಜರ್ಮನಿಯಲ್ಲಿ ತನ್ನ ಫೋನ್ ಕಳೆದು ಹೋಗಿರುವುದಾಗಿ ಹೇಳಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು.
ಅಲ್ಲದೆ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವ ಪ್ರಜ್ವಲ್ನ ಅಜ್ಜ ಮಾಜಿ ಪ್ರಧಾನಿಯಾಗಿದ್ದು, ಆತನ ಚಿಕ್ಕಪ್ಪ ಹಾಲಿ ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿದ್ದರು. ಆತನ ತಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕೃತ್ಯದ ಮಾಹಿತಿ ನೀಡಲು ಬಂದ ಸಂತ್ರಸ್ತೆಗೆ ಹಿಂದೆ ಯಾರೊಬ್ಬರೂ ನೆರವು ನೀಡಿರಲಿಲ್ಲ. ಬಲಾಢ್ಯರಾಗಿರುವುದರಿಂದಲೇ ಆಕೆಯ ಧ್ವನಿ ಹತ್ತಿಕ್ಕಲಾಗಿತ್ತು ಎಂದು ಪೀಠಕ್ಕೆ ವಿವರಿಸಿದರು.ಒಂದು ವೇಳೆ ಹಾಲಿ ಪ್ರಕರಣದಲ್ಲಿ ಪ್ರಜ್ವಲ್ಗೆ ಜಾಮೀನು ಮಂಜೂರು ಮಾಡಿದರೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಪ್ರಕರಣ ಎದುರಿಸುತ್ತಿರುವ ಆತನ ತಂದೆ ಹೆಚ್. ಡಿ. ರೇವಣ್ಣ ಮತ್ತು ಆತನ ತಾಯಿ ಭವಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಮೇಲೂ ಪರಿಣಾಮ ಮುಂದುವರಿಯುವುದಲ್ಲದೆ, ಪ್ರಜ್ವಲ್ ಮತ್ತೆ ಅಂತಹುದೇ ಕೃತ್ಯ ಮುಂದುವರಿಸುವ ಸಾಧ್ಯತೆ ಇರಲಿದೆ. ಹೀಗಾಗಿ, ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು.
Laxmi News 24×7