ಹಾಸನ : ಮಾಹಿತಿ ಹಕ್ಕು ಕಾಯ್ದೆಯಡಿ ಶುಲ್ಕ ಕಟ್ಟಿ ದಾಖಲಾತಿ ಪಡೆಯುವುದಕ್ಕಾಗಿ, ಹಣ ಹೊಂದಿಸಲು ಸಾಧ್ಯವಾಗದೇ ರೈತರೊಬ್ಬರು ತನ್ನ ಒಂದು ಹಸುವನ್ನೇ ಮಾರಾಟ ಮಾಡಿರುವ ವಿಶೇಷ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸುವ ಅಧಿಕಾರಿಗಳ ಪ್ರವೃತ್ತಿಯಿಂದ ಬೇಸತ್ತ ರೈತರೊಬ್ಬರು, ಮಾಹಿತಿ ಹಕ್ಕು ಕಾಯ್ದೆಯಡಿ ಗ್ರಾಮ ಪಂಚಾಯತಿಯೊಂದರ ಕಾಮಗಾರಿಗಳಿಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲಾತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಹಸು ಮಾರಾಟದಿಂದ ಬಂದ ಹಣದಿಂದ ಕೊನೆಗೆ 32 ಸಾವಿರ ಪುಟಗಳ ದಾಖಲಾತಿಗಳನ್ನು ಎತ್ತಿನಗಾಡಿಯಲ್ಲಿ ತುಂಬಿ ಮನೆಗೆ ತಂದಿದ್ದಾರೆ.
ಜಿಲ್ಲೆಯ ಅರಕಲಗೂಡು ತಾಲೂಕು, ರಾಮನಾಥಪುರ ಹೋಬಳಿ, ಬಸವನಹಳ್ಳಿ ಗ್ರಾಮದ ಬಿ. ಎಸ್. ರವಿ ಎಂಬುವವರು ಕಾಳೇನಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ನಡೆದಿರುವ ನೂರಾರು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೋರಿ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಪಿಡಿಒ ಅವರು ನೋಟಿಸ್ ನೀಡಿ, ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ಕಡತಗಳನ್ನು ಪರಿಶೀಲಿಸಲು ತಿಳಿಸಿದ್ದರು. ಅರ್ಜಿದಾರ ಬಯಸಿದ ದಾಖಲೆಗಳು ಸುಮಾರು 16,370 ಪುಟಗಳು ಇದ್ದಿದ್ದರಿಂದ ಪ್ರತಿ ಕಾಪಿಗೆ 2 ರೂ. ನಂತೆ 32 ಸಾವಿರದ 340 ರೂ. ಶುಲ್ಕವನ್ನು ಡಿಡಿ ಮೂಲಕ ಪಾವತಿಸಲು ಸೂಚಿಸಿದ್ದರು.
Laxmi News 24×7