ಬೆಂಗಳೂರು: ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಬಹಳ ಮುಖ್ಯ ಲೀಡ್ ಸಿಕ್ಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, “ಬಹಳ ಮುಖ್ಯವಾದ ಲೀಡ್ ಸಿಕ್ಕಿದೆ. ಅದರ ಬಗ್ಗೆ ನಾನು ಇಲ್ಲಿ ಹೇಳೋದಿಲ್ಲ. ಅವರಿಗೆ ಗೊತ್ತಾದ್ರೆ ಎಚ್ಚರವಾಗ್ತಾರೆ. ಅವರನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಇಷ್ಟೇ ಸಮಯದಲ್ಲಿ ಆಗಬೇಕು ಅಂದ್ರೆ ಆಗುತ್ತಾ?. ನಾವು ಬಿಡಲ್ಲ, ಹಿಡಿದು ಹಾಕ್ತೇವೆ. ಬಿಜೆಪಿಯವರು ಸುಮ್ಮನೆ ಮಾತನಾಡ್ತಾರೆ” ಎಂದರು.
ಕೃತ್ಯದಲ್ಲಿ ಸಿಬ್ಬಂದಿ ಭಾಗಿಯಾದ ಆರೋಪದ ವಿಚಾರಕ್ಕೆ, “ಅದೆಲ್ಲವೂ ತನಿಖೆಯಲ್ಲಿ ಗೊತ್ತಾಗುತ್ತದೆ. ನಾವು ಯಾವುದನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದರು.
ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ: ನವೆಂಬರ್ ಕ್ರಾಂತಿ ಶುರು ಎಂಬ ವಿಚಾರವಾಗಿ ಮಾತನಾಡಿ, “ನಿನ್ನೆ ಸಿಎಂ ಹೇಳಿಕೆಯನ್ನು ನೀವೆಲ್ಲ ನೋಡಿದ್ದೀರಲ್ಲ. ಯಾವ ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ. ಅಂತಹ ಯಾವ ಬೆಳವಣಿಗೆಯೂ ಇಲ್ಲ” ಎಂದು ತಿಳಿಸಿದರು.
ಸಚಿವ ಚೆಲುವರಾಯಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದಕ್ಕೆ, “ದೆಹಲಿಗೆ ಯಾರೇ ಹೋದರೂ ಭೇಟಿ ಮಾಡ್ತಾರೆ. ಎಐಸಿಸಿ ಅಧ್ಯಕ್ಷರು, ಜನರಲ್ ಸೆಕ್ರೆಟರಿಯನ್ನು ಭೇಟಿ ಮಾಡ್ತಾರೆ. ಅದು ನಮ್ಮ ಪಕ್ಷದಲ್ಲಿರುವ ಪದ್ಧತಿ. ಖರ್ಗೆಯವರನ್ನು ಭೇಟಿ ಮಾಡಿದ್ದರೆ ತಪ್ಪಿಲ್ಲ. ಅದಕ್ಕೆ ಬೇರೆ ಅರ್ಥ ಕೊಡೋದು ಸರಿಯಲ್ಲ” ಎಂದರು.
ಹೈಕಮಾಂಡ್ ಮಧ್ಯಪ್ರವೇಶಿಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಒತ್ತಾಯಿಸಿದ್ದಾರೆ ಎನ್ನಲಾಗಿರುವ ವಿಚಾರವಾಗಿ ಮಾತನಾಡಿ, “ಬಹಳ ಊಹಾಪೋಹಗಳಿವೆ. ಯಾವುದೇ ತೀರ್ಮಾನವಿರಲಿ, ಅದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸ್ಥಳೀಯವಾಗಿ ಯಾರೂ ಮಾಡೋಕೆ ಆಗಲ್ಲ. ಹೈಕಮಾಂಡ್ ಬಿಟ್ಟು ನಮ್ಮಲ್ಲಿ ಏನೂ ನಡೆಯಲ್ಲ. ನಾವು ಏನೇ ಹೇಳಿಕೆ ಕೊಟ್ರೂ, ಅದು ನಡೆಯಲ್ಲ. ಗೊಂದಲ ಇದ್ರೆ ಅವರು ಬಗೆಹರಿಸ್ತಾರೆ. ಅವರಿಗೆ ಗೊತ್ತಿಲ್ಲದೆ ಏನಾದ್ರೂ ನಡೆಯುತ್ತಾ?. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಎಂಟ್ರಿಯಾಗಬೇಕೋ ಆಗ ಆಗ್ತಾರೆ. ಅದರ ಅಗತ್ಯ ಈಗ ಇಲ್ಲವೆನಿಸುತ್ತಿದೆ. ಹಾಗಾಗಿ ಅವರು ಮಧ್ಯಪ್ರವೇಶ ಮಾಡಿಲ್ಲ” ಎಂದು ಹೇಳಿದರು.
ಎಟಿಎಂ ವಾಹನ ದರೋಡೆ ಬಗ್ಗೆ ಮಾತನಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಅಂದಾಜು 7 ಕೋಟಿ ಹಣ ದರೋಡೆಯಾಗಿದೆ. ಕಂಟ್ರೋಲ್ ರೂಮ್, ಬೇರೆ ಬೇರೆ ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲರೂ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ” ಎಂದಿದ್ದರು.
Laxmi News 24×7