ಬೆಂಗಳೂರು: ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಪ್ರಿಯಾಂಕಾ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಸದಾಶಿವನಗರ ಠಾಣೆ ಪೊಲೀಸರು ಸೈಬರ್ ವಂಚಕನನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ದೆಹಲಿಯ ಸೋನಿಯಾ ನಗರದಲ್ಲಿ ಬಂಧಿಸಿ ಕರೆತರಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಪ್ರತಿಕ್ರಿಯಿಸಿದ ದೂರುದಾರರಾದ ನಟ ಉಪೇಂದ್ರ, ”ಬುದ್ಧಿವಂತ ಎಂದು ಎನಿಸಿಕೊಳ್ಳುವವರೇ ದಡ್ಡರಾಗಿರುತ್ತಾರೆ, ದಡ್ಡರಂತೆ ಇರುವವರೇ ಬುದ್ಧಿವಂತರಾಗಿರುತ್ತಾರೆ. ಆರ್ಡರ್ ಡೆಲಿವರಿ ಮಾಡುವವರ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ್ದರು. ವಂಚನೆಯಾಗಿರುವುದು ನಮಗೆ ತಿಳಿಯುವಷ್ಟರಲ್ಲೇ ನನ್ನ ಮಗ, ಪ್ರಿಯಾಂಕಾ ಅವರ ಸ್ನೇಹಿತರು ಒಟ್ಟು 1.50 ಲಕ್ಷ ರೂಪಾಯಿ ಹಣ ವರ್ಗಾಯಿಸಿಬಿಟ್ಟಿದ್ದರು. ತಕ್ಷಣ ವಿಡಿಯೋ ಮೂಲಕ ಎಲ್ಲರನ್ನೂ ಎಚ್ಚರಿಸಿದೆವು. ಪೊಲೀಸ್ ದೂರು ಕೊಟ್ಟ ಬಳಿಕ ಯಾರೂ ಹಣ ವರ್ಗಾಯಿಸಿರಲಿಲ್ಲ” ಎಂದು ತಿಳಿಸಿದರು.ನಾವು ಪಾಸಿಟಿವ್ ವಿಚಾರಗಳಿಗಿಂತ ನೆಗೆಟಿವ್ ವಿಚಾರಗಳನ್ನು ನೋಡುವುದು ಜಾಸ್ತಿ. ಸೆಲೆಬ್ರಿಟಿ, ಪೊಲೀಸರು ಪರಿಚಯವಿರುತ್ತಾರೆ ಎನ್ನುವುದೇನೂ ಇಲ್ಲ. ನಮ್ಮ ಪೊಲೀಸರು ತುಂಬಾ ಉತ್ತಮ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಈ ರೀತಿ ವಂಚನೆಗಳನ್ನು ತಡೆಗಟ್ಟಲು ಸಾಕಷ್ಟು ತಾಂತ್ರಿಕವಾಗಿ ಅಪ್ಡೇಟ್ ಆಗಿದ್ದಾರೆ. ತೊಂದರೆಯಾದಾಗ ಪೊಲೀಸ್ ಸಹಾಯವಾಣಿ (112)ಗೆ ಕರೆ ಮಾಡಿದರೆ 10 ನಿಮಿಷದೊಳಗೆ ಅವರನ್ನು ತಲುಪುತ್ತಾರೆ. ಇಂತಹ ವಿಚಾರಗಳು ಜನರಿಗೆ ತಿಳಿಯಬೇಕು, ಆಗಲೇ ಅವರಿಗೂ ಧೈರ್ಯ ಬರುತ್ತದೆ” ಎಂದು ತಿಳಿಸಿದರು.ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಈ ಪ್ರಕರಣದಲ್ಲಿ ವಿಭಿನ್ನ ಮಾದರಿಯಲ್ಲಿ ವಂಚನೆ ಮಾಡಲಾಗಿತ್ತು.
ದೂರುದಾರರು ಗೋಲ್ಡನ್ ಅವರ್ನಲ್ಲಿ ದೂರು ನೀಡಿದ್ದರಿಂದ ಆರೋಪಿಯನ್ನು ಬೇಗನೆ ಪತ್ತೆಹಚ್ಚಲು ಸಹಕಾರಿಯಾಯಿತು. ಸಾರ್ವಜನಿಕರು ಈ ರೀತಿಯ ವಂಚನೆಗಳಿಗೊಳಗಾಗಬಾರದು. ಒಂದು ವೇಳೆ ಆದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಿದರೆ ಆರೋಪಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಈ ಪ್ರಕರಣದ ಮೂಲಕ ಆರೋಪಿಯ ಇತರೆ ಕೆಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
Laxmi News 24×7