ಬೆಳಗಾವಿ: 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಬೆಳಗಾವಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಶಿಕ್ಷಣ ಕ್ಷೇತ್ರದಲ್ಲಿ ರಾಜಶ್ರೀ ನಾಗರಾಜ, ಸಂಕೀರ್ಣ ಕ್ಷೇತ್ರದಲ್ಲಿ ಪುಂಡಲೀಕಶಾಸ್ತ್ರಿ (ಬುಡಬುಡಕೆ) ಮತ್ತು ಜಾನಪದ ಕ್ಷೇತ್ರದಲ್ಲಿ ಸಣ್ಣನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ.
ಸಣ್ಣನಿಂಗಪ್ಪ ಮುಶನ್ನಗೋಳ ಅವರು ಗೋಕಾಕ್ ತಾಲೂಕಿನ ತೆಳಗಿನಹಟ್ಟಿ ಗ್ರಾಮದವರು. 77 ವರ್ಷದ ಅವರು ಬಾಲ್ಯದಲ್ಲಿಯೇ ಡೊಳ್ಳಿನ ಹಾಡುಗಳನ್ನು ಹಾಡುತ್ತಾ ಬೆಳೆದವರು. ಡೊಳ್ಳಿನ ಹಾಡಿನ ಮೂಲಕ ಪ್ರಸಿದ್ದರಾದ ಇವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಾಗೂ ಹಲವಾರು ಜನಪ್ರಿಯ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ.
ಈಟಿವಿ ಭಾರತ ಸಣ್ಣನಿಂಗಪ್ಪ ಮುಶನ್ನಗೋಳ ಅವರನ್ನು ಸಂಪರ್ಕಿಸಿದಾಗ ಬಾಲ್ಯದಲ್ಲಿ ಕುರಿ ಕಾಯುತ್ತಿದ್ದೆ. ಕುರಿ ಹಿಂಡಿನಲ್ಲಿ ಹಾಡುವುದನ್ನು ಕಲಿಯಲು ಶುರು ಮಾಡಿದೆ. ಬಳಿಕ 18ನೇ ವಯಸ್ಸಿನಿಂದ ಕಾರ್ಯಕ್ರಮಗಳಲ್ಲಿ ಡೊಳ್ಳಿನ ಪದ ಹಾಡುತ್ತಾ ಬಂದಿದ್ದೇನೆ. ಈಗಲೂ ಹಾಡುವುದನ್ನು ಬಿಟ್ಟಿಲ್ಲ. ಮೊನ್ನೆ ಕಿತ್ತೂರು ಉತ್ಸವದಲ್ಲೂ ಕಾರ್ಯಕ್ರಮ ಕೊಟ್ಟಿದ್ದೇನೆ. ನನ್ನ ಕಲಾಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಬಹಳ ಸಂತೋಷ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ರಾಜಶ್ರೀ ನಾಗರಾಜ್ ಅವರು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ ಅವರ ಧರ್ಮಪತ್ನಿ. ಶಿಕ್ಷಣ ಕ್ಷೇತ್ರದಲ್ಲಿ ಅವಿತರ ಸೇವೆ ಸಲ್ಲಿಸಿರುವ ಇವರು ಬೆಳಗಾವಿ, ಖಾನಾಪುರ, ನಿಪ್ಪಾಣಿ ಮುಂತಾದ ಸ್ಥಳಗಳಲ್ಲಿ ಕಳೆದ 20 ವರ್ಷಗಳಿಂದ 38 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಜನವರಿ 26, 2016ರಂದು ಮರಾಠಾ ಮಂಡಲ ಸಮೂಹ ಸಂಸ್ಥೆಗಳ(ಒಂದು ಸಂಸ್ಥೆ) 15,800 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡಂತೆ ಒಂದೇ ರೀತಿಯ ವೇಷಭೂಷಣದೊಂದಿಗೆ ಏಕಕಾಲದಲ್ಲಿ 5 ದೇಶಭಕ್ತಿ ಗೀತೆಗಳನ್ನು ನಿರಂತರವಾಗಿ ಹಾಡುವ ಮೂಲಕ ವಿಶ್ವದಾಖಲೆ ಮಾಡಿದ್ದರು. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ, ಇಂಡಿಯನ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಯೂನಿಕ್ ವರ್ಲ್ಡ್ ರೆಕಾರ್ಡ್ಗಳಲ್ಲಿ ದಾಖಲೆಗೆ ಇವರ ಕಾಲೇಜು ಪಾತ್ರವಾಗಿದೆ.
ಪುಂಡಲೀಕ ಶಾಸ್ತ್ರೀ (ಬುಡಬುಡಕೆ) ಅವರು ಬೆಳಗಾವಿ ಜಿಲ್ಲೆಯವರಾಗಿದ್ದು, ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಸೇವೆ ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
Laxmi News 24×7