ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಗಡಿಜಿಲ್ಲೆ ಬೆಳಗಾವಿಯಲ್ಲಿ ಸಂಭ್ರಮ ಕಳೆಗಟ್ಟಿದೆ. ಈ ಬಾರಿಯ ರಾಜ್ಯೋತ್ಸವದಲ್ಲಿ ಇಲ್ಲಿನ ಬೆಳಗಾವಿ ಕೆಎ ಪುಟ ತಂಡದ “ಸೋತ್ರು ಗೆದ್ರು ಆರ್ ಸಿಬಿ ಬಿಡಾಂಗಿಲ್ಲಾ, ಜೀವಾ ಹೋದ್ರು ಬೆಳಗಾವಿ ಕೊಡಾಂಗಿಲ್ಲ” ಬರಹದ ಟೀಶರ್ಟ್ ಗಳು ಗಮನ ಸೆಳೆಯುತ್ತಿವೆ. ಕಳೆದ 10 ವರ್ಷಗಳಿಂದ ಈ ಪುಟ ಗಡಿಯಲ್ಲಿ ಕನ್ನಡದ ಕೈಂಕರ್ಯಕ್ಕೆ ಪಣ ತೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.
ಹೌದು, ಒಂದೆಡೆ ಬೆಳಗಾವಿಯಲ್ಲಿ ಕನ್ನಡ ಗಟ್ಟಿಗೊಳಿಸಲು ವಿವಿಧ ಕನ್ನಡ ಸಂಘಟನೆಗಳು ಹಲವು ದಶಕಗಳಿಂದ ಹೋರಾಡುತ್ತಿವೆ. ಅದಕ್ಕೂ ಮೊದಲು ಕನ್ನಡ ಸಾಹಿತಿಗಳು, ಹೋರಾಟಗಾರರು ಎಂಇಎಸ್ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಅದೆಲ್ಲದರ ಪರಿಣಾಮ ಇಲ್ಲಿ ಈಗ ಕನ್ನಡ ಬಲಿಷ್ಠವಾಗಿದ್ದು, ಎಂಇಎಸ್ ನೆಲೆ ಕಳೆದುಕೊಂಡಿದೆ. ಆದರೂ ಪ್ರತಿವರ್ಷ ರಾಜ್ಯೋತ್ಸವ ದಿನ ಕಪ್ಪು ಬಟ್ಟೆ ತೊಟ್ಟು ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸುತ್ತಾರೆ. ಅದಕ್ಕೆ ವಿರುದ್ಧವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಶುರು ಮಾಡಿದ ಬೆಳಗಾವಿ ಕೆಎ ಪುಟದಿಂದ ಬಿಳಿ ಟೀಶರ್ಟ್ ಅಭಿಯಾನ ಆರಂಭವಾಯಿತು. ಪ್ರತಿವರ್ಷವೂ ಒಬ್ಬೊಬ್ಬ ಮಹಾಪುರುಷರಿಗೆ ರಾಜ್ಯೋತ್ಸವ ಸಮರ್ಪಿಸುತ್ತಾ, ಪಂಚಿಂಗ್ ಡೈಲಾಗ್ ಬರಹದ ಟೀಶರ್ಟ್ ಮಾರಾಟ ಮಾಡಿ ಕನ್ನಡಿಗರು ರಾಜ್ಯೋತ್ಸವದಲ್ಲಿ ಸಂಭ್ರಮಿಸುವಂತೆ ಮಾಡಿದೆ.
ಬೆಳಗಾವಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಿರಣ ಮಾಳನ್ನವರ, ಸೌರಭ ಪಾಟೀಲ, ರಾಘವೇಂದ್ರ ತಳವಾರ, ಬಸವರಾಜ ಕುಂಬಾರ, ಅಕ್ಷಯ ಮಾಸ್ತಮರಡಿ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ 2015ರಲ್ಲಿ ಬೆಳಗಾವಿ ಕೆಎ ಪೇಜ್ ಆರಂಭಿಸಿದರು. ಕನ್ನಡ ನಾಡು, ನುಡಿ, ಜಲಕ್ಕೆ ಧಕ್ಕೆ ಎದುರಾದಾಗ, ಖಾಸಗಿ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಅಪಮಾನ ಆದಾಗ ಈ ಪುಟ ಸಂಬಂಧಿಸಿದವರನ್ನು ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಒಂದು ರೀತಿ ಕನ್ನಡಿಗರ ಮುಖವಾಣಿ ಆಗಿದ್ದು, ಗಡಿಯಲ್ಲಿ ಕನ್ನಡ ಕ್ರಾಂತಿ ಮೊಳಗಿಸುತ್ತಿದೆ.
Laxmi News 24×7