ಶಿವಮೊಗ್ಗ: ಗ್ರಾಮದಲ್ಲಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಜಿಲ್ಲೆಯ ನಾಲ್ಕು ಗ್ರಾಮಗಳು ತೀರ್ಮಾನಿಸಿವೆ.
ಜಿಲ್ಲೆಯ ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯತಿಯ ಬರೂರು, ಕಲ್ಲುಕೊಪ್ಪ, ತೆಪ್ಪಗೋಡು ಮತ್ತು ಮುಳುಕೇರಿ ಗ್ರಾಮಸ್ಥರು ರಾಜ್ಯ ಸರ್ಕಾದ ಸಮೀಕ್ಷೆಯಿಂದ ದೂರವಿರಲು ನಿರ್ಧರಿಸಿದ್ದಾರೆ.
“ನಾವು ನಮ್ಮ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ಪರದಾಡುತ್ತಿದ್ದೇವೆ. ಹೀಗಾಗಿ ನಾವು ಗಣತಿಯಲ್ಲಿ ಭಾಗಿಯಾಗುವುದಿಲ್ಲ” ಎಂದು ಬರೂರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೊದಲು ನೆಟ್ವರ್ಕ್ ನೀಡಿ, ನಂತರ ಗಣತಿ ನಡೆಸಿ” ಎಂದು ಗ್ರಾಮ ಪಂಚಾಯತಿ ಎದುರು ಬ್ಯಾನರ್ ಕಟ್ಟಿದ್ದಾರೆ. “ನಾವು ಗಣತಿ ವಿರೋಧಿಗಳಲ್ಲ, ಆದರೆ ನಮಗೆ ನೆಟ್ವರ್ಕ್ ನೀಡಿ, ನಾವೇ ಗಣತಿಯಲ್ಲಿ ಭಾಗವಹಿಸುತ್ತೇವೆ” ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಈ ಭಾಗದಲ್ಲಿ ದೇಶದಲ್ಲಿ ಸ್ವಾತಂತ್ರ ಬಂದಾಗಿನಿಂದ ಯಾವುದೇ ನೆಟ್ವರ್ಕ್ ವ್ಯವಸ್ಥೆ ಇಲ್ಲ. ಇದು ಶರಾವತಿ ಹಿನ್ನೀರಿನ ಪ್ರದೇಶವಾಗಿರುವ ಕಾರಣ ಸಾಕಷ್ಟು ವರ್ಷಗಳಿಂದ ನೆಟ್ವರ್ಕ್ ಇಲ್ಲದೆ ಜನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಗಣತಿ ಕಾರ್ಯಕ್ಕಾಗಿ ನಾಲ್ಕು ಗ್ರಾಮದ ಗ್ರಾಮಸ್ಥರನ್ನು ಬರೂರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸುವಂತೆ ಸೂಚಿಸಿತ್ತು. ಇದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ.
Laxmi News 24×7