ಬೆಂಗಳೂರು: ರಂಗಭೂಮಿ ಕಲಾವಿದ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಾಸ್ಯ ನಟ ಯಶವಂತ್ ಸರದೇಶಪಾಂಡೆ (Yashwant Sardeshpande) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟನಿಗೆ 62 ವರ್ಷಗಳಾಗಿತ್ತು.
ಸೂಪರ್ ಹಿಟ್ ‘ರಾಮ ಶಾಮ ಭಾಮ’ ಸಿನಿಮಾ ಖ್ಯಾತಿಯ ಹಾಸ್ಯನಟ ಬೆಂಗಳೂರಿನ ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 9:30ರ ಸರಿಸುಮಾರು ಕೊನೆಯುಸಿರೆಳೆದರು.
ಇವರು ರಂಗಭೂಮಿ ತೊಡಗಿಸಿಕೊಂಡಿದ್ದರು. ಹಲವು ಖ್ಯಾತ ನಾಟಕಗಳನ್ನು ನಿರ್ದೇಶಶಿಸುತ್ತಿದ್ದರು. ಸದ್ಯ ಪತ್ನಿ ಮಾಲತಿ ದೇಶಪಾಂಡೆ ಹಾಗೂ ಮಗಳನ್ನು ಅಗಲಿದ್ದಾರೆ. ಅಭಿಮಾನಿಗಳೂ ಸೇರಿ ಕನ್ನಡ ಚಿತ್ರರಂಗದಿಂದ ಸಂತಾಪ ವ್ಯಕ್ತವಾಗುತ್ತಿದೆ.
ಇವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಇವರು ನಟಿಸಿ, ನಿರ್ದೇಶಿಸಿರುವ ‘ಆಲ್ ದಿ ಬೆಸ್ಟ್ ನಾಟಕ’ ಅಭೂತಪೂರ್ವ ಯಶಸ್ಸು ಕಂಡಿದೆ. ಪತ್ನಿ ಮಾಲತಿ ಅವರೂ ಕೂಡಾ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಭಾಷೆಯಿಂದಲೇ ಕನ್ನಡಿಗರ ಮನಗೆದ್ದ ಹಾಸ್ಯ ನಟ: ರಂಗಭೂಮಿ ಹಾಗು ಕನ್ನಡ ಸಿನಿಮಾಗಳಲ್ಲಿ ತಮ್ಮ ಉತ್ತರ ಕರ್ನಾಟಕದ ಭಾಷೆಯಿಂದಲೇ ಕನ್ನಡಿಗರ ಮನಗೆದ್ದ ಹಾಸ್ಯ ನಟ ಇವರು. ಬಹುತಾರಾಗಣದ ಸೂಪರ್ ಹಿಟ್ ರಾಮ ಶಾಮ ಭಾಮ ಎಂಬ ಚಿತ್ರಕ್ಕೆ ಸಂಭಾಷಣೆ ಬರೆದು, ಪಾತ್ರವೊಂದಕ್ಕೆ ಜೀವ ತುಂಬಿದ್ದರು. ಇಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ ಹಾಸನ್ ಅವರ ಪಾತ್ರದಿಂದ ಉತ್ತರ ಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ.
ಬನ್ನೇರುಘಟ್ಟದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಪಾರ್ಥಿವ ಶರೀರ: ಯಶವಂತ ಸರದೇಶಪಾಂಡೆ ಅವರ ಪತ್ನಿ ಮಾಲತಿ ಸರದೇಶಪಾಂಡೆಯೂ ಖ್ಯಾತ ಕಿರುತೆರೆ ನಟಿ. ಈ ಜೋಡಿ ಪ್ರೀತಿಸಿ ಮದುವೆ ಆಗಿ, ರಂಗಭೂಮಿಯಲ್ಲಿ ಒಟ್ಟಿಗೆ ಕೆಲಸ ಮಾಡೋ ಮೂಲಕ ಜನಪ್ರಿಯತೆ ಪಡೆದಿತ್ತು. ಇದೀಗ ಯಶವಂತ ಸರದೇಶಪಾಂಡೆ ಅವರನ್ನು ಕಳೆದಕೊಂಡ ನೋವಿನಲ್ಲಿ ಪತ್ನಿ ಸೇರಿ ಕುಟುಂಬಸ್ಥರಿದ್ದಾರೆ. ಸದ್ಯ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಇರಿಸಲಾಗಿದೆ.
ಯಶವಂತ ಸರದೇಶಪಾಂಡೆ ನಾಟಕಗಳ ಜೊತೆಗೆ ಬ್ರೇಕಿಂಗ್ ನ್ಯೂಸ್, ಅಮೃತಧಾರೆ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಭಿನ್ನ ಹಾಸ್ಯ ಚಟಾಕಿಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಟಕಗಳ ಮೂಲಕ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ನೀಡುವ ಕೆಲಸ ಮಾಡುತ್ತಿದ್ದರು.
Laxmi News 24×7