ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ಒಟ್ಟಾಗಿ ಹೊಸ ಕ್ರಮ ಆರಂಭಿಸಿವೆ. ಇನ್ನು ಮುಂದೆ ನದಿಗೆ ಕಸ ಬಿಸಾಡುವವರಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ನದಿಗೆ ಪೂಜಾ ಸಾಮಗ್ರಿ, ಪ್ಲಾಸ್ಟಿಕ್, ಕಸವನ್ನು ತಂದು ಎಸೆದು ಹಾಳು ಮಾಡುತ್ತಿರುವ ಜನರಿಗೆ ಬುದ್ಧಿ ಕಲಿಸಲು ನೂತನ ನಿಯಮ ಜಾರಿ ಮಾಡಲಾಗಿದೆ. ಅದರಂತೆ ಇಂದು ವ್ಯಕ್ತಿಯೊಬ್ಬರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗಿದೆ.
ಕುಮಾರಧಾರ ಸೇತುವೆಯ ಮೇಲೆ ಕಾರ್ಕಳ ಮೂಲದ ವೇದವ್ಯಾಸ ತಂತ್ರಿ ಎಂಬವರು ವಾಹನದಿಂದ ಕಸ ಬಿಸಾಡುತ್ತಿರುವುದನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದಾರೆ. ಈ ದೃಶ್ಯವನ್ನು ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಸ್ವಚ್ಛತೆ ಬಗ್ಗೆ ಈಗಾಗಲೇ ಸಮರ ಸಾರಿರುವ ಪಂಚಾಯತಿ ಅಧಿಕಾರಿಗಳು ಕಸ ಎಸೆದ ವ್ಯಕ್ತಿಯ ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ವಾಹನದ ಮಾಲೀಕರನ್ನು ಪತ್ತೆ ಮಾಡಿ ಪಂಚಾಯತಿಗೆ ಮರು ಮಾಹಿತಿ ನೀಡಿದ್ದಾರೆ. ನಂತರ ಗ್ರಾಮ ಪಂಚಾಯತಿ ನಿಯಮಾನುಸಾರ ಕ್ರಮ ಕೈಗೊಂಡು ವೇದವ್ಯಾಸ ತಂತ್ರಿ ಅವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
Laxmi News 24×7