ಹುಬ್ಬಳ್ಳಿ: ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಸೆಪ್ಟೆಂಬರ್ 19ರಂದು ಇಲ್ಲಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಜನಗಣತಿ ನಿರ್ಣಯ ಮಾಡಿದೆ. ಹಿಂದೆ ಜನಗಣತಿ ಆದಾಗ ಸಮಾಜದ ವಿರೋಧ ವ್ಯಕ್ತವಾದ ಕಾರಣ ಮತ್ತೊಂದು ಜನಗಣತಿಗೆ ಸಿದ್ಧತೆ ನಡೆದಿದೆ. ಕಾರಣ ಶುಕ್ರವಾರ ನಾವು ನೂರಾರು ಮಠಾಧಿಪತಿಗಳು ಸಭೆ ಸೇರಿ ಚರ್ಚಿಸಿದ್ದೇವೆ. ವೀರಶೈವ ಲಿಂಗಾಯತ ಎರಡೂ ಒಂದೇ. ಬೇರೆ ಎಂದು ಇಬ್ಭಾಗ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಖಂಡಿಸಬೇಕು ಎಂದರು.
ಇದು ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ: ವೀರಶೈವ ಲಿಂಗಾಯತ ಮಹಾಸಭಾದ ನಿಲುವೂ ಇದೇ ಆಗಿರುತ್ತದೆ. ಅದರ ಪರವಾಗಿಯೇ ನಾವು ಇರುತ್ತೇವೆ. ಲಿಂಗಾಯತ ಧರ್ಮ ಮಾಡಬೇಕೆಂಬುದು ಬಸವಣ್ಣ ಹೆಸರು ಬಳಕೆ ಮಾಡಿಕೊಂಡು ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದು ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಬಸವ ಸಂಸ್ಕೃತಿ ಯಾತ್ರೆ ಹೆಸರಲ್ಲಿ ವೈದಿಕ ಸಂಸ್ಕೃತಿ ವಿರೋಧಿಸುತ್ತಿದ್ದಾರೆ. ಆ ವೇದಿಕೆಯಲ್ಲಿ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರೇ ಅದರ ನೇತೃತ್ವ ವಹಿಸಿದ್ದಾರೆ. ಅವರ ನಡೆ, ನುಡಿ ಭಿನ್ನವಾಗಿದೆ. ಪ್ರತ್ಯೇಕ ಲಿಂಗಾಯತ ಆಗಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಹೇಳಿದರು.
Laxmi News 24×7