ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ 52 ದಿನ ಬಾಕಿ ಇದೆ. ಆದರೆ, ಚುನಾವಣಾ ಕಣ ಈಗಲೇ ರಂಗೇರಿದೆ. ಜಾರಕಿಹೊಳಿ ಸಹೋದರರು ಶತಾಯಗತಾಯ ಈ ಬಾರಿ ಡಿಸಿಸಿ ಬ್ಯಾಂಕ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಇನ್ನು ವಿರೋಧಿ ಬಣ ಸೈಲೆಂಟ್ ಆಗಿಯೇ ರಣತಂತ್ರ ರೂಪಿಸುತ್ತಿದೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಕ್ಟೋಬರ್ 19ಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಹಲವು ವರ್ಷಗಳಿಂದ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಅವಿರೋಧವಾಗಿ ನಿರ್ದೇಶಕರು ಆಯ್ಕೆ ಆಗುತ್ತಿದ್ದರು. ಆದರೆ, ಈ ಬಾರಿ ಹಲವು ತಾಲ್ಲೂಕುಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಇದರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಖಾನಾಪುರ ತಾಲ್ಲೂಕಿನಿಂದ ಸ್ಪರ್ಧಿಸಲು ಕಳೆದ ಆರು ತಿಂಗಳಿಂದ ಓಡಾಟ ಆರಂಭಿಸಿದ್ದರು. ಇಲ್ಲಿನ ಪಿಕೆಪಿಎಸ್ ಅಧ್ಯಕ್ಷರು, ಸದಸ್ಯರೊಂದಿಗೆ ಸಭೆ ಮಾಡಿದ್ದರು. ಆದರೆ, ದಿಢೀರ್ ಅಂತಾ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಒಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ, ಖಾನಾಪುರದಿಂದ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸುತ್ತಿಲ್ಲ ಅಂತಾ ಹೇಳಿದ್ದು ಹಲವು ಅಚ್ಚರಿಗೆ ಕಾರಣವಾಗಿದೆ.
ಸತೀಶ ಜಾರಕಿಹೊಳಿ ಹೇಳಿದ್ದೇನು?: ಖಾನಾಪುರದಿಂದ ಚುನಾವಣೆಗೆ ಸ್ಪರ್ಧಿಸಲು ಕಳೆದ ನಾಲ್ಕೈದು ತಿಂಗಳಿಂದ ಚನ್ನರಾಜ್ ಹಟ್ಟಿಹೊಳಿ ತಯಾರಿ ನಡೆಸಿದ್ದರು. ಸಾಕಷ್ಟು ಪಿಕೆಪಿಎಸ್ ಸೊಸೈಟಿಗಳನ್ನು ಸಂಪರ್ಕಿಸಿ ಅವರ ಬೆಂಬಲ ಗಳಿಸುವಲ್ಲೂ ಯಶಸ್ವಿಯಾಗಿದ್ದರು. ಆದರೆ, ಜಿಲ್ಲೆಯ ರಾಜಕೀಯ ಹಿತದೃಷ್ಟಿಯಿಂದ ಅವರ ಸ್ಪರ್ಧೆಯನ್ನು ನಾವು ಹಿಂಪಡೆಯುತ್ತಿದ್ದೇವೆ. ನಿನ್ನೆ ಚನ್ನರಾಜ ಜೊತೆಗೆ ಈ ಕುರಿತು ಸುದೀರ್ಘವಾಗಿ ನಾನು ಚರ್ಚಿಸಿದ್ದೇನೆ. ಇನ್ನು ಚುನಾವಣಾ ಕಣದಿಂದ ಚನ್ನರಾಜ್ ಹಿಂದೆ ಸರಿದಿದ್ದು ಯಾಕೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ವಿವರವಾದ ಮಾಹಿತಿ ತಿಳಿಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Laxmi News 24×7