ರಾಯಚೂರು: ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್. ಎಸ್. ಬೋಸರಾಜು ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಹಾಗೂ ಬಂಧನ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತೆ. ಗ್ಯಾಂಬ್ಲಿಂಗ್ ಮಾಡ್ತಾರೋ ಮತ್ತೊಂದು ಮಾಡ್ತಾರೋ ಯಾರೇ ಮಾಡಲಿ. ಕಾನೂನುಬಾಹಿರವಾಗಿ ಮಾಡಿರುವಂತಹ ಚಟುವಟಿಕೆಗಳಿಗೆ ಸರ್ಕಾರ ಎಂದೂ ಅವಕಾಶ ನೀಡುವುದಿಲ್ಲ. ಅವರು ಯಾರೇ ಇರಲಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರ ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಎಸ್ಐಟಿ ರಚನೆ ಮಾಡಿ ತನಿಖೆ ನಡೆದಿರುವುದಕ್ಕೆ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ವಾಗತ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿ. ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಈಗಾಗಲೇ ಎಫ್ಐಆರ್ ಆಗಿದೆ. ಬಂಧನವೂ ಆಗಿದೆ. ಯಾವುದೇ ಸರ್ಕಾರ ಇರಲಿ ಕಂಪ್ಲೇಂಟ್ ಬಂದರೆ ತನಿಖೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ, ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ.
ಈಗ ಸತ್ಯ ಹೊರ ಬರುತ್ತಿದೆ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಒಂದೂವರೆ ತಿಂಗಳ ಬಳಿಕ ಎಲ್ಲಿ ಏನೂ ಸಿಕ್ಕಿಲ್ಲ ಅಂತ ಈಗ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ಮುಖ್ಯ. ಶಾಂತಿ, ನೆಮ್ಮದಿ ಬೇಕಿಲ್ಲ. ಧರ್ಮದ ಆಧಾರದ ಮೇಲೆ ಗಲಾಟೆ ಮಾಡಿಸುವುದು ಮೊದಲಿನಿಂದ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಂಗಳೂರು, ಉಡುಪಿಯಲ್ಲಿ ಗಲಭೆಗಳಾಗಿದ್ದವು ಎಂದು ಹೇಳಿದ್ದಾರೆ.
ಕಾನೂನು ಬಾಹಿರ ಬೆಟ್ಟಿಂಗ್ಗೆ ಸಂಬಂಧಿಸಿ ಹಣ ವರ್ಗಾವಣೆ ಆರೋಪದ ಮೇರೆಗೆ ಕಾಂಗ್ರೆಸ್ ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಮತ್ತು ಅವರ ಸಹೋದರ ಹಾಗೂ ಇತರರಿಗೆ ಸಂಬಂಧಿಸಿದ ಹಲವು ಜಾಗಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದರು.
ವಿರೇಂದ್ರ ಪಪ್ಪಿ ಅವರು ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಸೇರಿ ಮುಂತಾದ ಆನ್ಲೈನ್ ಬೆಟ್ಟಿಂಗ್ ಸೈಟ್ಗಳನ್ನು ನಡೆಸುತ್ತಿದ್ದಾರೆ. ಶಾಸಕರ ಸಹೋದರ ಕೆ. ಸಿ. ತಿಪ್ಪೇಸ್ವಾಮಿ ಅವರು ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್ಎಸ್ ಟೆಕ್ನಾಲಜೀಸ್ ಮತ್ತು ಪ್ರೈಮ್ 9 ಟೆಕ್ನಾಲಜೀಸ್ ಹೆಸರಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಮೂರು ಸಂಸ್ಥೆಗಳು ಕಾಲ್ ಸೆಂಟರ್ ಸೇವೆಗಳು ಮತ್ತು ವಿರೇಂದ್ರ ಅವರ ಗೇಮಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
Laxmi News 24×7