ಬೆಂಗಳೂರು: ಮನೆಯಲ್ಲಿ ಮಲಗಿದ್ದ ಯುವತಿಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ ಆರೋಪದಡಿ ಮನೆ ಕೆಲಸದ ಮಹಿಳೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 10ರಂದು ಬೆಳಗಿನ ಜಾವ ಬಸಪ್ಪ ಗಾರ್ಡನ್ನಲ್ಲಿ ಘಟನೆ ನಡೆದಿತ್ತು. ಸುಶ್ಮಿತಾ (21) ಎಂಬಾಕೆಯ ಮೇಲೆ ಹಲ್ಲೆಗೈದ ಆರೋಪದಡಿ ಲಲಿತಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಲಿತಾ, ಬಸಪ್ಪ ಗಾರ್ಡನ್ನಲ್ಲಿರುವ ಸರೋಜಮ್ಮ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರೊಂದಿಗೆ ವಾಸವಿದ್ದಳು. ಸರೋಜಮ್ಮ ಅವರಿಗೆ ಪರಿಚಿತಳಾಗಿದ್ದ ಸುಶ್ಮಿತಾ ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದರು. ಅದೇ ರೀತಿ ಒಮ್ಮೆ ಮನೆಗೆ ಬಂದಾಗ ಲಲಿತಾ ಹಾಗೂ ಸುಶ್ಮಿತಾ ನಡುವೆ ಗಲಾಟೆಯಾಗಿತ್ತು. ವೈಯಕ್ತಿಕ ವಿಚಾರ ತೆಗೆದು ಲಲಿತಾಳಿಗೆ ಸುಶ್ಮಿತಾ ನಿಂದಿಸಿದ್ದಳು. ಆಗಸ್ಟ್ 9ರಂದು ಸರೋಜಮ್ಮ ಅವರ ಮನೆಗೆ ಬಂದಿದ್ದ ಸುಶ್ಮಿತಾ, ಊಟ ಮುಗಿಸಿ ಮನೆಯ 3ನೇ ಮಹಡಿಯಲ್ಲಿರುವ ರೂಮ್ನಲ್ಲಿ ಮಲಗಿದ್ದಳು. ಈ ವೇಳೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೂಮ್ಗೆ ತೆರಳಿದ್ದ ಲಲಿತಾ, ಸುಶ್ಮಿತಾಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಳು. ಅಲ್ಲದೆ ಹಲ್ಲೆಯ ಬಳಿಕ ತನಗೆ ಏನೂ ಗೊತ್ತಿಲ್ಲವೆಂದು ಹಾಗೂ ತಾನು ತುರ್ತಾಗಿ ಊರಿಗೆ ಹೋಗಬೇಕೆಂದು ಲಲಿತಾ ತೆರಳಿದ್ದಳು ಎಂದು ಆರೋಪಿಸಲಾಗಿದೆ.
ರಕ್ತದ ಮಡುವಿನಲ್ಲಿದ್ದ ಸುಶ್ಮಿತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮನೆ ಮಾಲಕಿ ಸರೋಜಮ್ಮ ನೀಡಿರುವ ದೂರಿನನ್ವಯ ಹತ್ಯೆ ಯತ್ನ ಆರೋಪದಡಿ ವೈಯಾಲಿ ಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಲಿತಾಳ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7