ಕಲಬುರಗಿ: ರೈತರಿಗೆ ಕೆಲ ಆಗ್ರೋ ಏಜೆನ್ಸಿಗಳು MRPಗಿಂತ ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ಕೃಷಿ ಅಧಿಕಾರಿಗಳು 8 ಆಗ್ರೋ ಏಜೆನ್ಸಿಗಳ ಲೈಸನ್ಸ್ ರದ್ದುಪಡಿಸಿದ್ದಾರೆ.
“DAP ಗೊಬ್ಬರದ ದರ 1,350 ಇದ್ದರೆ 1,600, 1,800ಕ್ಕೆ ರೂಪಾಯಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಯುರಿಯಾ ರಸಗೊಬ್ಬರ 266 ರೂಪಾಯಿ ಇದ್ದರೆ 900 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದರು. ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಿ, ದರ ಪಟ್ಟಿ ಮಾಡಿ ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಲು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಬೇಕು. ರೈತರಿಗೆ ಯೋಗ್ಯ ಬೆಲೆಯಲ್ಲಿ ಗೊಬ್ಬರ, ಬೀಜ, ಮತ್ತು ಕ್ರಿಮಿನಾಶಕ ಸಿಗುವಂತಹ ವ್ಯವಸ್ಥೆ ಮಾಡಬೇಕು ” ಎಂದು ರೈತ ಸಂಘದ ಅಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಮನವಿ ಮಾಡಿಕೊಂಡಿದ್ದಾರೆ.
ಜತೆಗೆ, ಅಧಿಕೃತ ಜಿಎಸ್ಟಿ ಬಿಲ್ ಕೊಡದೆ ನಕಲಿ ಬಿಲ್ಗಳನ್ನು ರೈತರಿಗೆ ಕೊಟ್ಟು ಆಗ್ರೋ ಏಜೆನ್ಸಿಗಳು ಮೋಸ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಹೀಗಾಗಿ MRP ಗಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ, ಬಿತ್ತನೆ ಬೀಜ ಹೆಚ್ಚುವರಿ ದರಕ್ಕೆ ಮಾರಾಟ ಹಾಗೂ ನಿಯಮಗಳನ್ನು ಉಲ್ಲಂಘಿಸಿರುವ ಆಗ್ರೋ ಏಜೆನ್ಸಿಗಳ ಲೈಸನ್ಸ್ನ್ನು ಕೃಷಿ ಅಧಿಕಾರಿಗಳು ರದ್ದು ಪಡಿಸಿದ್ದಾರೆ.
“ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುವ ಬಗ್ಗೆ ಕ್ರಮ ವಹಿಸಿದ್ದೇವೆ. ಈಗಾಗಲೇ ನಾವು 8 ಏಜೆನ್ಸಿಗಳ ಮೇಲೆ ಕ್ರಮತೆಗೆದುಕೊಂಡಿದ್ದೇವೆ. ಇದಾಗಿಯೂ ಮುಂದೆ ಫರ್ಟಿಲೈಜರ್ ಅಂಗಡಿಯಲ್ಲಿ ರೈತರಿಗೆ ವಂಚನೆ ಮಾಡುವುದು ಕಂಡುಬಂದರೆ ಮುಲಾಜಿಲ್ಲದೆ ಲೈಸನ್ಸ್ ರದ್ದು ಮಾಡುವುದಾಗಿ” ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
Laxmi News 24×7