ಬೆಂಗಳೂರು: ಧರ್ಮಸ್ಥಳದಲ್ಲಿ ಮೃತದೇಹ ವಿಲೇವಾರಿ ಪ್ರಕರಣ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತನಿಖೆಗೆ ಮೊದಲೇ ಹೇಳೋದು ಸರಿಯಲ್ಲ. ಇದೀಗ ಎಸ್ಐಟಿ ತನಿಖೆ ಆಗ್ತಿದೆ. ತನಿಖೆ ಮುಗಿಯವವರೆಗೆ ಒಂದು ತೀರ್ಮಾನಕ್ಕೆ ಬರುವುದು ತಪ್ಪು. ಈಗಲೇ ಯಾರ ಮೇಲೆ ದೂಷಿಸೋದು ತಪ್ಪು ಎಂದರು.
ತನಿಖೆಗೆ ಸರ್ಕಾರದ ಮೇಲೆ ಒತ್ತಡವಿತ್ತೇ ಎಂಬ ಪ್ರಶ್ನೆಗೆ ಸರ್ಕಾರದ ಮೇಲೆ ಯಾರ ಒತ್ತಡವೂ ಇಲ್ಲ. ಇಷ್ಟೆಲ್ಲಾ ಆದ ಮೇಲೂ ಸರ್ಕಾರ ಸುಮ್ಮನಿದ್ರೆ ಹೇಗೆ?. ಜನರು ಏನೆಂದು ತಿಳಿದುಕೊಳ್ತಾರೆ. ಇದೊಂದು ಗಂಭೀರ ಸ್ವರೂಪದ ಪ್ರಕರಣ. ಎಲ್ಲ ಮಾಧ್ಯಮಗಳೂ ಇದನ್ನೇ ಹೇಳ್ತಿವೆ. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಸರ್ಕಾರ ಯಾರ ಮೇಲೂ ಬೊಟ್ಟು ಮಾಡ್ತಿಲ್ಲ. ಯಾರನ್ನೋ ಗುರಿಯಾಗಿಸುವ ಉದ್ದೇಶ ಇಲ್ಲ. ಬಿಜೆಪಿಯವರು ಬೊಟ್ಟು ಮಾಡ್ತಿದ್ದಾರೆ. ನಾವು ಸ್ವಚ್ಚವಾಗಿದ್ದರೆ ಯಾರು ಟಾರ್ಗೆಟ್ ಮಾಡಲ್ಲ. ಏನಾದರೂ ಲೋಪ ಆದರೆ ತಾನೇ ಆರೋಪ ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ಮೃತದೇಹಗಳನ್ನು ವಿಲೇವಾರಿ ಮಾಡಿರುವುದಾಗಿ ಓರ್ವ ವ್ಯಕ್ತಿಯ ಹೇಳಿಕೆ ಆಧರಿಸಿ ದಾಖಲಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಪೂರ್ಣ ತನಿಖೆಗೆ ಹಿರಿಯ ಐಪಿಎಲ್ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ಎಸ್ಐಟಿ ರಚಿಸಿ ಆದೇಶಿಸಿದೆ.
Laxmi News 24×7