ನೆಲಮಂಗಲ : ಪ್ರೀತಿಸುವಾಗ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ ಯುವಕನಿಗೆ ಪ್ರೇಯಸಿಯ ಸ್ನೇಹಿತರು ಚಾಕು ಇರಿದಿರುವ ಘಟನೆ ನೆಲಮಂಗಲ ಟೌನ್ನ ಜೆಪಿ ಹಾಸ್ಟೆಲ್ ಮುಂಭಾಗದ ವಿನಾಯಕ ಜ್ಯೂಸ್ ಸೆಂಟರ್ನಲ್ಲಿ ನಡೆದಿದೆ.
ಘಟನೆಯಲ್ಲಿ ಚೇತನ್ ಮತ್ತು ಸುದೀಪ್ ಎಂಬುವರ ಮೇಲೆ ನಾಲ್ವರು ಯುವಕರು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಚೇತನ್ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದೀಪ್ ಬೆನ್ನಿನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಸುದೀಪ್ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದಾರೆ.
ದೂರಿನಲ್ಲಿ ಏನಿದೆ? ಹಲ್ಲೆಗೊಳಗಾದ ಸುದೀಪ್ ಗೆ 2 ವರ್ಷದ ಹಿಂದೆ ಯುವತಿಯೊಬ್ಬಳ ಜೊತೆ ಪ್ರೀತಿಯಾಗಿತ್ತು. ಪ್ರೀತಿ ಮಾಡುವ ವೇಳೆ ಪ್ರಿಯತಮೆಗೆ 2 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದರು. ಇತ್ತೀಚಿಗೆ ಆಕೆ ಸುದೀಪ್ನಿಂದ ಅಂತರ ಕಾಯ್ದುಕೊಂಡು ಲವ್ ಬ್ರೇಕಪ್ ಮಾಡಿಕೊಂಡಿದ್ದರು. ಇದನ್ನರಿತ ಸುದೀಪ್ ಈ ಹಿಂದೆ ಕೊಟ್ಟ 2 ಸಾವಿರ ರೂಪಾಯಿ ಹಣವನ್ನು ವಾಪಸ್ ಕೇಳಿದ್ದಾರೆ. ಹೀಗಾಗಿ ಆಕೆ 1 ಸಾವಿರ ರೂಪಾಯಿ ಹಣವನ್ನು ಫೋನ್ ಪೇನಲ್ಲಿ ಕಳಿಸಿದ್ದಾರೆ. ಉಳಿದ ಒಂದು ಸಾವಿರ ರೂಪಾಯಿ ವಾಪಸ್ ಕೊಡುವಂತೆ ಸುದೀಪ್ ಮಾಜಿ ಪ್ರಿಯತಮೆಗೆ ಫೋನ್ ಮಾಡಿ ಕೇಳಿದ್ದಾನೆ.
ಈ ವಿಚಾರವನ್ನು ಯುವತಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಜುಲೈ 9 ರಂದು ಸುದೀಪ್ ಬಳಿಗೆ ಬಂದ ನಾಲ್ವರ ತಂಡ ಫೋನ್ ಪೇ ಮೂಲಕ 1 ಸಾವಿರ ರೂಪಾಯಿ ಹಣ ಹಾಕಿದ್ದಾರೆ. ಅದಾದ ಕೆಲ ಸಮಯದ ನಂತರ ಜ್ಯೂಸ್ ಅಂಗಡಿ ಬಳಿಗೆ ಬಂದ ಅದೇ ಯುವಕರು ಗಲಾಟೆಗೆ ಮುಂದಾಗಿದ್ದಾರೆ. ಆಗ ಚೇತನ್ ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಯುವಕರು ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ಜಗಳ ಬಿಡಿಸಲು ಹೋದ ಸುದೀಪ್ಗೂ ಬೆನ್ನಿಗೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ ಎಂದು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ದೂರುದಾರ ಸುದೀಪ್ ಮಾತನಾಡಿದ್ದು, ‘ನಾನೊಬ್ಬರಿಗೆ ಹಣವನ್ನು ಕೊಟ್ಟಿದ್ದೆ. ವಾಪಸ್ ಕೇಳಿದ್ದಕ್ಕೆ ಅವರ ಕಡೆಯ ನಾಲ್ವರು ಯುವಕರು ಬಂದು ಹಣವನ್ನು ಹಾಕಿ ಗಲಾಟೆ ಮಾಡಿ ಹೋಗಿದ್ದರು. ಮತ್ತೆ ಬಂದು ಗಲಾಟೆ ಮಾಡಲು ಮುಂದಾದ್ರು. ಈ ವೇಳೆ ಚೇತನ್ ಗಲಾಟೆ ತಡೆಯಲು ಮುಂದಾದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ರು. ಜಗಳ ಬಿಡಿಸಲು ಮುಂದಾದ ನನಗೂ ಚಾಕುವಿನಿಂದ ಚುಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದು ಹೇಳಿದ್ದಾನೆ.
Laxmi News 24×7