ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಅಖೇತಿ ಗ್ರಾಮ ಪಂಚಾಯತಿ ಪ್ರದೇಶದ ಕರಂಬಳನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ (ಶೀಟ್) ಹಾರಿಹೋಗಿದೆ. 1ರಿಂದ 5ನೇ ತರಗತಿಯವರೆಗಿನ ಶಾಲೆ ಇದಾಗಿದ್ದು, ರಜೆ ನೀಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ.
ಸಾಮಾನ್ಯವಾಗಿ ಶಾಲಾ ಸಮಯದಲ್ಲಿ ಶಾಲೆಯ ಹೊರಗೆ ಮತ್ತು ಅಂಗಳದಲ್ಲಿ ವಿದ್ಯಾರ್ಥಿಗಳ ಜನಸಂದಣಿ ಇರುತ್ತದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಭಾರೀ ಮಳೆಯಿಂದಾಗಿ ಜಿಲ್ಲಾಡಳಿತ ಮಂಗಳವಾರ ರಾತ್ರಿಯೇ ಜೋಯಿಡಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿತ್ತು.
ಶಾಲೆಯ ಕಟ್ಟಡಕ್ಕೆ ಸ್ಲ್ಯಾಬ್ ಹಾಕಲಾಗಿದೆ. ಮಳೆನೀರು ಸೋರಿಕೆಯಾಗುವ ಸಾಧ್ಯತೆ ಇರುವ ಕಾರಣಕ್ಕೆ ಸ್ಲ್ಯಾಬ್ ಮೇಲೆ ಶೀಟ್ನ ಮೇಲ್ಛಾವಣಿ ಮಾಡಲಾಗಿತ್ತು. ಈ ಛಾವಣಿ ಬಿರುಗಾಳಿಯಿಂದ ಹಾರಿಹೋಗಿ ಶಾಲಾ ಆವರಣದ ಒಳಗೆ ಮತ್ತು ಹೊರಗೆ ಬಿದ್ದಿದೆ. ಬುಧವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿತು. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಶಾಲೆಯನ್ನು ಮತ್ತೆ ತೆರೆಯಬೇಕೆಂದು ಸ್ಥಳೀಯರಾದ ಕೃಷ್ಣ ಗಾಂವಕರ ಒತ್ತಾಯಿಸಿದ್ದಾರೆ.
Laxmi News 24×7