ಬೆಂಗಳೂರು: ಜಾತಿ ಗಣತಿ ಮೂಲಕ ಸಮ ಸಮಾಜದ ನಿರ್ಮಾಣದ ಕನಸು ನರೇಂದ್ರ ಮೋದಿ ಅವರ ಸರ್ಕಾರಕ್ಕಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಗಣತಿ ವಿಷಯದಲ್ಲಿ ಯಾವುದೇ ಸದುದ್ದೇಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಹಿಂದುಳಿದ ವರ್ಗದ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ದುರುದ್ದೇಶ ಇದೆ. ಕಾಂಗ್ರೆಸ್ಸಿನವರು ಮತ್ತು ಸಿದ್ದರಾಮಯ್ಯನವರಿಗೆ ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಷಡ್ಯಂತ್ರ ಇದೆ; ಆದರೆ, ಬಿಜೆಪಿ ಮತ್ತು ಮೋದಿಜೀ ಅವರಿಗೆ ಕಾಯಕ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕೆಂಬ ಸದುದ್ದೇಶ ಅಡಗಿದೆ ಎಂದು ಹೇಳಿದರು.
ಕಾಂಗ್ರೆಸ್ಸಿನವರಿಂದ ಕೇವಲ ಭಾಷಣ : ಕಾಂಗ್ರೆಸ್ಸಿನವರು ಇತ್ತೀಚೆಗೆ ಈ ಕುರಿತು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಕೇವಲ ಭಾಷಣ ಮಾಡುತ್ತ ಬರುತ್ತಿದ್ದಾರೆ. ಆಡದೇ ಮಾಡುವವ ರೂಢಿಯೊಳಗುತ್ತಮನು ಎಂಬಂತೆ ಮೋದಿಜೀ ಅವರು ಹೆಚ್ಚು ಮಾತನಾಡದೇ ಈ ನಿರ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.
ದೇಶದ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ನ್ಯಾಯ ಕೊಡಬೇಕು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಮ ಸಮಾಜದ ಕನಸನ್ನು ಕಂಡಿದ್ದರು. ಆ ನಿಟ್ಟಿನಲ್ಲಿ ಸದುದ್ದೇಶದಿಂದ ಮೋದಿಜೀ ಈ ಉತ್ತಮ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
Laxmi News 24×7