ಚಿತ್ರದುರ್ಗ, (ಫೆಬ್ರವರಿ 04): ವಿಚಿತ್ರ. ನಂಬುವುದಕ್ಕೆ ಕಷ್ಟ ಅನಿಸಿದರೂ ನೀವು ನಂಬಲೇಬೇಕು. ಸರ್ಕಾರಿ ಕೆಲಸದ ಆಸೆಗೆ ಪತ್ನಿಯೇ ಗಂಡನನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನಡೆದಿದೆ. ಈತನ ಹೆಸರು ಸುರೇಶ್. ಚಿತ್ರದುರ್ಗದ ನೆಹರು ನಗರ ನಿವಾಸಿ. ಈತನ ತಂದೆ ಸರ್ಕಾರಿ ಕೆಲಸದಲ್ಲಿದ್ದ. ತಂದೆ ಸಾವಿನ ಬಳಿಕ ಅನುಕಂಪದ ಆಧಾರದಲ್ಲಿ ಸುರೇಶ್ಗೆ ತಂದೆಯ ಕೆಲಸ ಒಲಿದು ಬಂದಿತ್ತು. ಮಗ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಾಯಿ ಆಸೆಯಿಂದ ಗಂಡನ ಕೆಲಸವನ್ನ 2ನೇ ಮಗ ಸುರೇಶ್ಗೆ ಕೊಡಿಸಿದ್ದಳು. ಆದ್ರೆ, ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ SDA ಆಗಿದ್ದ ಸುರೇಶ್ ಪತ್ನಿಯ ಕಿರುಕುಳ ತಾಳದೆ ತನ್ನ ತಾಯಿ, ಸಹೋದರರ ಜೊತೆ ಮಾತು ಬಿಟ್ಟಿದ್ದೋನು, ಆಕ್ಟೋಬರ್ 8, 2024ರಂದು ಸಾವನ್ನಪ್ಪಿದ್ದಾನೆ.
ಹೇಳಿ ಕೇಳಿ ಸುರೇಶ್ಗೆ ಜಾಂಡೀಸ್ ಇತ್ತು. ಗಂಡನ ಸಾವಿನ ವಿಷಯವನ್ನ ಆತನ ಮನೆಯವರಿಗೂ ತಿಳಿಸದೇ ಪತ್ನಿ ನಾಗರತ್ನ ಅಂತ್ಯಕ್ರಿಯೆ ಮುಗಿಸಿದ್ದಳು. ಈಗ ಮೃತನ ತಾಯಿ ಸರೋಜಮ್ಮ. ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗನನ್ನ ಉಸಿರು ಗಟ್ಟಿಸಿಕೊಂದಿದ್ದಾಳೆ. ಜಾಂಡೀಸ್ನಿಂದ ಸತ್ತ ಎಂದು ನಾಟಕವಾಡ್ತಿದ್ದಾಳೆ. ಅವನ ಕೆಲಸ ಇವಳಿಗೆ ಬರುತ್ತೆ ಎಂದು ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂತ್ಯಕ್ರಿಯೆ ನಡೆದ 4 ತಿಂಗಳ ಬಳಿಕ ಪೊಲೀಸ್ರು ಇದೀಗ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ಸುರೇಶ್ ಕಳೆಬರಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.