ತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಸಿದ್ದರಾಮಯ್ಯ ಬಣದ ಸಚಿವ ರಾಜಣ್ಣ, ಜಿ.ಪರಮೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ತುಮಕೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಶ್ರೀನಿವಾಸ್ ಪತ್ನಿ ಭಾರತಿ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಶ್ರೀನಿವಾಸ್, ಚುನಾವಣೆ ಗೆದ್ದ ಪ್ರತಿನಿಧಿಗಳನ್ನು ಬಿಟ್ಟು ನಾಮಿನಿ ಆದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ನಡೀತಿದೆ ಎಂದು ವಾಗ್ದಾಳಿ ಮಾಡಿದ್ದ ಶ್ರೀನಿವಾಸ್, ಇದೀಗ ಮತ್ತೆ ಗುಬ್ಬಿಯಲ್ಲಿ ನಡೆದ ಸಹಕಾರಿ ಸಂಘದ ಅಭಿನಂದನಾ ಸಮಾರಂಭದಲ್ಲಿ ಪರಮೇಶ್ವರ್ ಹಾಗೂ ರಾಜಣ್ಣರ ವಿರುದ್ದ ಹೆಸರು ಹೇಳದೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಅಧಿಕಾರದ ಹಪಾಹಪಿ ನನಗಿಲ್ಲ, ನೇರವಾಗಿ ಜನರ ಪ್ರೀತಿ, ವಿಶ್ವಾಸ ಗಳಿಸಿ ನಾನು ಅಧಿಕಾರಕ್ಕೆ ಬಂದವನು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೀವು ಗಮನಿಸುತ್ತಿದ್ದೀರಿ. ವ್ಯಕ್ತಿಗತವಾಗಿ ನನಗೆ ಅಧಿಕಾರವಿದೆ ಎಂದು ಹೇಳಿ ಏನ್ ಬೇಕಾದರೂ ಮಾಡಬಹುದು ಎಂದು ಕೆಲವರು ಮನೋಭಾವ ಬೆಳೆಸಿಕೊಂಡಿದ್ದಾರೆ. ನಾನು, ನಾನು ಅನ್ನೋರು ಹೆಚ್ಚಾಗಿದ್ದಾರೆ. ಅವರು ಎಂದೂ ಮುಂದೆ ಬರಲ್ಲ. ಎಷ್ಟು ದಿನ ಯಾರ್ಯಾರು ಹೆಂಗೆಗೆ ಆಡ್ತಾರೆ ಅಂತ ನಾವೂ ನೋಡ್ತೀವಿ, ಕಾಯ್ತಿದ್ದೇವೆ. ನನ್ನ ಪತ್ನಿಗೆ ಅಧಿಕಾರ ಸಿಕ್ಕಿಲ್ಲ ಎಂಬ ವ್ಯಾಮೋಹ ನನಗಿಲ್ಲ. ಅವರ ಕಡೆಯವರಿಗೆ ಯಾರಾದರೂ ಮಾಡಿ ಅಂದೆ. ನನ್ನ ಹೆಂಡ್ತಿಯನ್ನು ಮಾಡಿ ಅಂದಿಲ್ಲ ಎಂದಿದ್ದರು.
Laxmi News 24×7