ಬೆಂಗಳೂರು: ಖಾಸಗಿ ಬ್ಯಾಂಕ್ ಮ್ಯಾನೇಜರ್ವೊಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ (ಎಸ್ಸಿ-ಎಸ್ಟಿ) ಯಡಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ಹೂಡಿರುವ ಪ್ರಕರಣ ರದ್ದು ಕೋರಿ ಬೆಂಗಳೂರಿನ ಗಿರಿನಗರದ ಕೆ.ಎಸ್.ವಿಶ್ವಕಿರಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಇದು ದುರ್ಬಲರ ರಕ್ಷಣೆಗಾಗಿ ಇರುವ ವಿಶೇಷ ಕಾಯಿದೆಯ ದುರುಪಯೋಗದ ಮತ್ತೊಂದು ಪ್ರಕರಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಸಾರ್ವಜನಿಕರ ಕಣ್ಣೆದುರು ಅರ್ಜಿದಾರರ ಆರೋಪಿ ಜಾತಿ ಹೆಸರಿನಲ್ಲಿ ನಿಂದನೆ ಮಾಡಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷ್ಯವಿಲ್ಲ, ಆರೋಪಗಳಲ್ಲೂ ಅದು ಸ್ಪಷ್ಟವಾಗಿಲ್ಲ. ಆ ಹಿನ್ನೆಲೆಯಲ್ಲಿ ಇದು ಸಮಾಜದ ದುರ್ಬಲ ವರ್ಗದವರ ರಕ್ಷಣೆಗಾಗಿ ರೂಪಿಸಿರುವ ವಿಶೇಷ ಕಾನೂನಿನ ದುರ್ಬಳಕೆಯಾಗಿದೆ. ಹಾಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಹಲವು ಪುಟಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಆರೋಪಿಗೆ ಹೇಗೆ ಕೃತ್ಯ ಎಸಗಿದ್ದಾರೆ ಎಂದು ವಿವರಿಸಲಾಗಿದೆ. ಆರೋಪಿ ಅಂಜಿನಮ್ಮ ಎಂಬ ಮಹಿಳೆಯನ್ನು ಜಾತಿ ಹೆಸರು ಹೇಳಿ ಕೆಟ್ಟ ಶಬ್ಧ ನಿಂದಿಸಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ಆದರೆ, ಆ ಮಹಿಳೆ ದೂರು ನೀಡಿಲ್ಲ. ದೂರು ನೀಡಿರುವುದು ರಾಮಯ್ಯ ಎಂಬುವರು. ಆದರೆ ರಾಮಯ್ಯಗೆ ಘಟನೆ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಲಾಗಿದೆ.
Laxmi News 24×7