ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಮುಕ್ತವಾಗಿದ್ದಾರೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಣ್ಣ ಅವರಿಗೆ ಯಾವ ರೀತಿಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದನ್ನು ಅವರ ಸಂಬಂಧಿ ಮಧು ಬಂಗಾರಪ್ಪ ವಿವರಿಸಿದ್ದಾರೆ. ‘ನಡೆದಿರುವುದು ತುಂಬ ದೊಡ್ಡ ಆಪರೇಷನ್. ಹಾಗಾಗಿಯೇ ನಾನು ಅವರ ಜೊತೆ ಅಲ್ಲಿಗೆ ಹೋಗಿದ್ದು. ಯಶಸ್ವಿಯಾಗಿ ಸರ್ಜರಿ ನಡೆದಿದೆ’ ಎಂದು ಹೇಳಿದ್ದಾರೆ. ಒಟ್ಟು 6 ಸರ್ಜರಿ ಮಾಡಿದ್ದು, 190 ಹೊಲಿಗೆ ಹಾಕಲಾಗಿದೆ ಎಂದು ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಏಕಕಾಲಕ್ಕೆ 6 ಆಪರೇಷನ್ ನಡೆಯಿತು. ಕರುಳಿನ ಒಂದು ಭಾಗವನ್ನು ತೆಗೆದು, ಅದನ್ನೇ ಯೂರಿನ್ ಬ್ಲಾಡರ್ ಆಗಿ ಮಾಡುತ್ತಾರೆ. ಒಳಗಿನಿಂದ 190 ಹೊಲಿಗೆ ಹಾಕಲಾಗಿದೆ. ನಾವು ಇದನ್ನೆಲ್ಲ ವಿವರವಾಗಿ ಹೇಳಿರಲಿಲ್ಲ. ಐದೂವರೆ ಗಂಟೆ ಸರ್ಜರಿ ಪ್ಲ್ಯಾನ್ ಮಾಡಲಾಗಿತ್ತು. 5 ಗಂಟೆ ಒಳಗೆ ಮುಗಿಸಿದರು. ಯಾವುದೇ ತೊಂದರೆ ಆಗಲಿಲ್ಲ. 4 ಗಂಟೆ ಒಳಗೆ ನಾವು ಹೋಗಿ ಮಾತನಾಡಿಸಿದೆವು’ ಎಂದು ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
‘ಎಲ್ಲರ ಹಾರೈಕೆಯಿಂದ, ಉತ್ತಮ ವೈದ್ಯರಿಂದ ಎಲ್ಲವೂ ಚೆನ್ನಾಗಿ ಆಗಿದೆ. ಎಲ್ಲರೂ ಶಿವಣ್ಣನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ವದಂತಿಗಳು ನಿಲ್ಲಬೇಕು. ಆಗಿರುವುದು ಬ್ಲಾಡರ್ ರಿಕನ್ಸ್ಟ್ರಕ್ಷನ್. ಕಿಡ್ನಿ ವೈಫಲ್ಯ ಅಂತ ಹೇಳುವುದು ತಪ್ಪಾಗುತ್ತದೆ. ಸರಿಯಾಗಿ ಗೊತ್ತಿಲ್ಲದೇ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಾರೆ. ಹಾಗೆ ಮಾಡಬಾರದು’ ಎಂದಿದ್ದಾರೆ ಮಧು ಬಂಗಾರಪ್ಪ.
Laxmi News 24×7