ಚಿಕ್ಕೋಡಿ: ದೀಪಾವಳಿ ಬಂದರೆ ಸಾಕು; ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಸಡಗರ ಇಮ್ಮಡಿಯಾಗುತ್ತಿತ್ತು. ಮಣ್ಣಿನ ಹಣತೆಗಳನ್ನು ಮಾಡಲು ನಾಲ್ಕು ತಿಂಗಳು ಮೊದಲು ಸಿದ್ಧತೆ ನಡೆಯುತ್ತಿದ್ದವು. ಇಲ್ಲಿನ 30ಕ್ಕೂ ಹೆಚ್ಚು ಕುಂಬಾರ ಕುಟುಂಬಗಳು ಈ ಹಬ್ಬಕ್ಕಾಗಿ ಕಾಯುತ್ತಿದ್ದವು.
ಆದರೆ, ಇತ್ತೀಚಿನ ದಿನಗಳಲ್ಲಿ ಕುಂಬಾರರಿಗೂ ದೀಪಾವಳಿಗೆ ಸಂಬಂಧವೇ ಇಲ್ಲ ಎಂಬಷ್ಟು ಸಮಸ್ಯೆ ತಲೆದೋರಿದೆ.
ಜೇಡಿಮಣ್ಣಿನ ಹಣತೆಗೆ ಬೇಡಿಕೆ ಇಲ್ಲದೇ ಕುಂಬಾರರು ಕುಂಬಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಎಲೆಕ್ಟ್ರಿಕಲ್ ದೀಪ, ತಗಡಿನ ಪಣತಿ, ಪಿಂಗಾಣಿ ಮಣ್ಣಿನ ದೀಪಗಳ ಹಾವಳಿ ಹೆಚ್ಚಾಗಿದ್ದರಿಂದ ಜೇಡಿಮಣ್ಣಿನ ಹಣತೆಗಳು ನೇಪಥ್ಯಕ್ಕೆ ಸರಿದಿವೆ.
ಹಲವು ವರ್ಷಗಳಿಂದ ಕುಂಬಾರಿಕೆ ವೃತ್ತಿ ಮಾಡುತ್ತ ಬಂದಿರುವ ಇಲ್ಲಿನ ಜನ ಬೇಸಿಗೆಯಲ್ಲಿ ಮಣ್ಣಿನ ಮಡಿಕೆ, ಹರಿವೆ, ಶ್ರಾವಣ ಮಾಸದಲ್ಲಿ ಗುಳ್ಳವ್ವ, ಸೀಗವ್ವ, ಮಣ್ಣೆತ್ತು, ದೀಪಾವಳಿಯಲ್ಲಿ ಹಣತೆಗಳ ತಯಾರಿ, ಸಂಕ್ರಾಂತಿಯ ಸಂದರ್ಭದಲ್ಲಿ ಮಣ್ಣಿನ ಕುಡಿಕೆಗಳ ತಯಾರಿಯನ್ನು ಮಾಡುತ್ತ ವರ್ಷವಿಡೀ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಆಧುನಿಕತೆ ಅಲೆಯಲ್ಲಿ ಸಂಪ್ರದಾಯದಿಂದ ಬಂದಿರುವ ಆರಾಧನೆ ತೆರೆ ಮರೆಗೆ ಸರಿಯುತ್ತಿದೆ.
Laxmi News 24×7