ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಅನುದಾನ ಇಲ್ಲದೇ ಬೆಳಗಾವಿ ನಗರದ ಅಭಿವೃದ್ಧಿ ಸಂಪೂರ್ಣ ಮರೀಚಿಕೆ ಆಗಿದ್ದು, ರಾಜ್ಯ ಸರ್ಕಾರ ಅನುದಾನ ನೀಡಿ ಗಡಿ ಭಾಗ ಬೆಳಗಾವಿ ಅಭಿವೃದ್ಧಿಯತ್ತ ಗಮನಹರಿಸುವಂತೆ ಆಗ್ರಹಿಸಿ ಪಾಲಿಕೆ ಪಕ್ಷೇತರ ಸದಸ್ಯ ಶಂಕರ ಪಾಟೀಲ ಸೈಕಲ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ.
ಸದ್ಯ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ 9.30 ಕೋಟಿ ರೂ. ಅನುದಾನದ ಹಂಚಿಕೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ ಶುರುವಾಗಿದ್ದು, ಅನುದಾನ ಇಲ್ಲದೇ ಸೊರಗಿರುವ ಪಾಲಿಕೆಯತ್ತ ರಾಜ್ಯ ಸರ್ಕಾರ ಗಮನಹರಿಸಬೇಕಿದೆ. ಹೀಗಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರನ್ನು ಭೇಟಿಯಾಗಿ ಅನುದಾನ ಒದಗಿಸುವಂತೆ ಮನವಿ ಮಾಡಲು ವಾರ್ಡ್ ಸಂಖ್ಯೆ 7ರ ಪಕ್ಷೇತರ ಸದಸ್ಯ ಶಂಕರ ಪಾಟೀಲ ಸೈಕಲ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ಪ್ರತಿ ವರ್ಷ 125 ಕೋಟಿ ರೂ. ಅನುದಾನ ಮಹಾನಗರ ಪಾಲಿಕೆಗೆ ಸಿಗುತ್ತಿತ್ತು. ಈಗ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಒಂದೂವರೆ ವರ್ಷದಿಂದ ಅನುದಾನವನ್ನೇ ನೀಡಿಲ್ಲ. ಪಕ್ಷದ ಚಿಹ್ನೆ ಮೇಲೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪಾಲಿಕೆಗೆ ಸರ್ಕಾರ ಅನುದಾನವನ್ನೇ ಕಲ್ಪಿಸಿಲ್ಲ. ಇದರಿಂದ ಬೆಳಗಾವಿ ನಗರದ ಅಭಿವೃದ್ಧಿ ಗಗನಕುಸುಮವಾಗಿದೆ.
ಅಭಿವೃದ್ಧಿ ಇಲ್ಲದೇ ಜನ ಹೈರಾಣ: 15ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರತಿ ವಾರ್ಡ್ಗೆ ಕೇವಲ 11 ಲಕ್ಷ ರೂ. ಅನುದಾನ ಮಾತ್ರ ಸಿಕ್ಕಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಅಭಿವೃದ್ಧಿ ಮಾಡುವುದಾದರೂ ಹೇಗೆ? ಅಭಿವೃದ್ಧಿ ಕೆಲಸಗಳಿಲ್ಲದೇ ವಾರ್ಡ್ನ ಜನರು ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಲ್ಲದೇ ಜನರು ರೋಸಿ ಹೋಗಿದ್ದಾರೆ. ಇದರಿಂದ ಸದಸ್ಯರು ಇತ್ತ ಅನುದಾನ ಇಲ್ಲದೇ ಸಾರ್ವಜನಿಕರ ತರಾಟೆಗೆ ಒಳಗಾಗುತ್ತಿದ್ದಾರೆ.
ಪಾಲಿಕೆಗೆ ಪ್ರತಿ ವರ್ಷ ಬರುತ್ತಿದ್ದ ಅನುದಾನವಷ್ಟೇ ನೀಡಿದರೂ ಎಲ್ಲ 58 ವಾರ್ಡ್ಗಳಿಗೆ ಸಮನಾಗಿ ಹಂಚಿಕೆ ಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹು ದಾಗಿದೆ. ಆದರೆ ಒಂದೂವರೆ ವರ್ಷದಿಂದ ಅನುದಾನವೇ ಇಲ್ಲದೇ ಪರಿತಪಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಪಕ್ಷೇತರ ಸದಸ್ಯ ಶಂಕರ ಪಾಟೀಲ ಬೆಂಗಳೂರಿಗೆ ತೆರಳಿ ಸಚಿವರನ್ನು ಭೇಟಿಯಾಗಿ ಅನುದಾನ ಕೊಡುವಂತೆ ಮನವಿ ಮಾಡಲಿದ್ದಾರೆ.