ಮುಧೋಳ: ಘಟಪ್ರಭಾ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ನಾನೂ ಸಹ ನಿರಂತರವಾಗಿ ಶ್ರಮಿಸುತ್ತಿದ್ದು ರೈತರು ಹಾಗೂ ಸಂತ್ರಸ್ತರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮನವಿ ಮಾಡಿದ್ದಾರೆ.
‘ಸರ್ಕಾರದ ಮಟ್ಟದಲ್ಲಿ ಸಂತ್ರಸ್ತರಿಗೆ ಹಾಗೂ ಬೆಳೆಹಾನಿಯಾದ ರೈತರಿಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಅನ್ವಯ ಪರಿಹಾರ ಒದಗಿಸುವ ಸಲುವಾಗಿ ಹಾಗೂ ಪರಿಹಾರ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸುವ ಸಲುವಾಗಿ ಆ.6ರಂದು ನಗರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ರೈತರು, ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೆ.
ಸಭೆಯಲ್ಲಿ ರೈತರ ಬೇಡಿಕೆ ಆಲಿಸಲು ಮುಖ್ಯಮಂತ್ರಿ ಮುಧೋಳ ನಗರಕ್ಕೆ ಕರೆತರಲು ಸಮಯ ಕೇಳಲಾಗುವುದು ಎಂದು ಭರವಸೆ ನೀಡಿದ್ದೆ. ಈ ಕಾರ್ಯದಲ್ಲಿ ನಾನು ನಿರತನಾಗಿದ್ದೇನೆ’ ಎಂದರು.
ಕಾತರಕಿ-ಕಲಾದಗಿ ಸೇತುವೆಗೆ ರೈತ ಮುಖಂಡರೊಂದಿಗೆ ಖುದ್ದು ಭೇಟಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಾಗ ಪ್ರವಾಹ ಉಂಟಾಗುವುದಕ್ಕೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ, ಶೀಘ್ರದಲ್ಲಿಯೇ ನೀರಾವರಿ ಸಮಿತಿ ವರದಿ ಬರಲಿದ್ದು, ಆ ಬಳಿಕ ಪ್ರವಾಹ ತಡಗೆ ಯಾವರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಾತರಕಿ-ನಿಂಗಾಪುರ ಬಳಿ ಬ್ಯಾರೇಜ್ ಅಗಲೀಕರಣ ಹಾಗೂ ಮುಧೋಳ-ಯಾದವಾಡ, ಚಿಂಚಖಂಡಿ ಸೇತುವೆ ಎತ್ತರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.