ಕಲಬುರಗಿ: ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ‘ಕಲ್ಯಾಣ’ದ ನಾಡಿಗೆ ಅಪಕೀರ್ತಿ ತಟ್ಟುತ್ತಿದೆ.
ಕಲ್ಯಾಣದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುತ್ತಿರುವ ಕಲಬುರಗಿ ಈಗ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಪ್ರಕರಣಗಳ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳುತ್ತಿದೆ. ಇದಕ್ಕೆ ಬೀದರ್, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳೂ ಹೊರತಾಗಿಲ್ಲ.
ಗೃಹ ಇಲಾಖೆಯ ಮಾಹಿತಿ ಪ್ರಕಾರ 2021ರಿಂದ 2024ರ ಜುಲೈ 10ರವರೆಗೆ ‘ಕಲ್ಯಾಣ’ದ ಏಳು ಜಿಲ್ಲೆಗಳ ವ್ಯಾಪ್ತಿಯ ಠಾಣೆಗಳಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ- 1985ರ (ಎನ್ಡಿಪಿಎಸ್) ಅಡಿ 564 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ 694 ಮಂದಿಯನ್ನು ಬಂಧಿಸಲಾಗಿದೆ. ಅತ್ಯಧಿಕ ಪ್ರಕರಣಗಳು ಸಿಟಿ ಪೊಲೀಸ್ ಕಮಿಷನರೇಟ್ (123 ಪ್ರಕರಣ) ಸೇರಿ ಕಲಬುರಗಿ ಜಿಲ್ಲೆಯಲ್ಲೇ (ಗ್ರಾಮೀಣ ಠಾಣೆಗಳು 146) ಒಟ್ಟು 269 ಪ್ರಕರಣಗಳು ದಾಖಲಾಗಿದ್ದು, 250 ಮಂದಿಯನ್ನು ಬಂಧಿಸಲಾಗಿದೆ.
ಆ ನಂತರದ ಸ್ಥಾನದಲ್ಲಿ ಬಳ್ಳಾರಿ ಇದ್ದು, 104 ಪ್ರಕರಣಗಳಲ್ಲಿ 128 ಮಂದಿಯನ್ನು ಬಂಧಿಸಲಾಗಿದೆ. ಬೀದರ್ ಮತ್ತು ವಿಜಯನಗರದಲ್ಲಿ ತಲಾ 59 ಪ್ರಕಣಗಳು ದಾಖಲಾಗಿವೆ. ಕ್ರಮವಾಗಿ 137 ಹಾಗೂ 87 ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ರಾಯಚೂರಿನಲ್ಲಿ 39 ಪ್ರಕರಣಗಳಲ್ಲಿ 58 ಬಂಧಿತರಾಗಿದ್ದಾರೆ.
ಅತಿಕಡಿಮೆ ಪ್ರಕರಣಗಳು ಯಾದಗಿರಿಯಲ್ಲಿ (15) ದಾಖಲಾಗಿದ್ದು, 13 ಮಂದಿಯನ್ನು ಬಂಧಿಸಲಾಗಿದೆ. ಕೊಪ್ಪಳದಲ್ಲಿ 21 ಆರೋಪಿಗಳು 19 ಪ್ರಕರಣಗಳಿಂದ ಬಂಧಿತರಾಗಿದ್ದಾರೆ. ಕಳೆದ 7 ತಿಂಗಳಲ್ಲಿ ಯಾದಗಿರಿಯಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ ಎಂಬುದು ತಿಳಿದುಬಂದಿದೆ.
ಕಲಬುರಗಿ ಜಿಲ್ಲಾ ಕಾರಾಗೃಹದೊಳಗೆ ಗಾಂಜಾ ಎಸೆದು ಓಡಿ ಹೋಗಿದ್ದು; ವಾಡಿಯಲ್ಲಿ ಪುಣೆ- ಭುವನೇಶ್ವರ ರೈಲಿನಲ್ಲಿ 22 ಕೆ.ಜಿ. ಗಾಂಜಾ ಸಾಗಾಟ; ಬೀದರ್ ತಾಲ್ಲೂಕಿನ ಭಂಗೂರ್ ಚೆಕ್ ಪೋಸ್ಟ್ ಬಳಿ ₹3.05 ಕೋಟಿ ಮೌಲ್ಯದ ಗಾಂಜಾ ಜಪ್ತಿ; ರಾಯಚೂರಿನಲ್ಲಿ 2022ರಲ್ಲಿ ವಿವಿಧೆಡೆ ದಾಳಿ ಮಾಡಿ ₹2.44 ಕೋಟಿ ಮೌಲ್ಯದ ಗಾಂಜಾ ವಶ… ಇಂತಹ ಸಾಲು ಪ್ರಕರಣಗಳು ‘ಕಲ್ಯಾಣ’ದಲ್ಲಿ ವರದಿ ಆಗುತ್ತಲೇ ಇವೆ.