ಬೆಳಗಾವಿ: ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ, ಬೆಳೆ ವಿಮೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಕುರಿತು ರೈತರಿಗೆ ನಿಯಮಿತವಾಗಿ ಮಾಹಿತಿ ನೀಡಬೇಕಿದ್ದ ಮತ್ತು ಬೆಳೆಹಾನಿಯಂಥ ಸಂದರ್ಭ ತ್ವರಿತವಾಗಿ ರೈತರ ನೆರವಿಗೆ ನಿಲ್ಲಬೇಕಿದ್ದ ಕೃಷಿ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ವಿವಿಧ ವೃಂದದ 498 ಹುದ್ದೆ ಮಂಜೂರಾಗಿವೆ. ಈ ಪೈಕಿ 205 ಮಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. 293 ಹುದ್ದೆ ಹಲವು ವರ್ಷಗಳಿಂದ ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಸಹಾಯಕ ಕೃಷಿ ಅಧಿಕಾರಿಗಳ(ಎಎಒ), ಕೃಷಿ ಅಧಿಕಾರಿಗಳ(ಎಒ) ಹುದ್ದೆಗಳೇ ದೊಡ್ಡಪ್ರಮಾಣದಲ್ಲಿ ಖಾಲಿ ಇರುವುದರಿಂದ ರೈತರಿಗೆ ತೊಂದರೆಯಾಗಿದೆ.
214ರ ಪೈಕಿ ಹದಿಮೂರೇ ಸಿಬ್ಬಂದಿ:
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಬಳಕೆ, ಕೃಷಿ ಪರಿಕರಗಳು, ಸಮಗ್ರ ಕೃಷಿ ಹೀಗೆ… ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲು ಸರ್ಕಾರ ಎಎಒ ಹುದ್ದೆ ಸೃಷ್ಟಿಸಿದೆ. ಕ್ಷೇತ್ರಮಟ್ಟದಲ್ಲಿ ಇವರು ರೈತರಿಗೆ ಮಾರ್ಗದರ್ಶನ ನೀಡುತ್ತಾರೆ. ಇದಕ್ಕಾಗಿ ಜಿಲ್ಲೆಗೆ 214 ಹುದ್ದೆ ಮಂಜೂರಾಗಿವೆ. ಆದರೆ, 13 ಜನರಷ್ಟೇ ಸೇವೆಯಲ್ಲಿದ್ದಾರೆ. 201 ಹುದ್ದೆ ಖಾಲಿ ಉಳಿದಿವೆ.
‘ಎರಡ್ಮೂರು ಗ್ರಾಮ ಪಂಚಾಯ್ತಿಗೆ ಒಬ್ಬರಾದರೂ ಎಎಒ ಇರಬೇಕು’ ಎಂಬ ನಿಯಮವಿದೆ. ಆದರೆ, 15 ತಾಲ್ಲೂಕು ಹೊಂದಿದ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೊಬ್ಬ ಅಧಿಕಾರಿಯೂ ಇಲ್ಲ. ಚಿಕ್ಕೋಡಿ ತಾಲ್ಲೂಕಿಗೆ 29 ಎಎಒ ಹುದ್ದೆ ಮಂಜೂರಾಗಿವೆ. ಆದರೆ, ಒಬ್ಬರೂ ಸೇವೆಯಲ್ಲಿಲ್ಲ. ಅಥಣಿಯಲ್ಲಿ 19 ಎಎಒ ಪೈಕಿ ಒಬ್ಬರು, ಹುಕ್ಕೇರಿಯಲ್ಲಿ 23ರ ಪೈಕಿ ಒಬ್ಬರು, ಸವದತ್ತಿಯಲ್ಲಿ 18ರ ಪೈಕಿ ಒಬ್ಬರು, ಖಾನಾಪುರದಲ್ಲಿ 22ರ ಪೈಕಿ ಒಬ್ಬರು ಕರ್ತವ್ಯದಲ್ಲಿದ್ದಾರೆ.