ಮೂಡಲಗಿ: ‘ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಸೌಹಾರ್ದಯುತ ರೀತಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಕಕ್ಷಿದಾರರಿಗೆ ಬಹಳ ಅನುಕೂಲವಾಗುವುದು’ ಎಂದು ಪಟ್ಟಣದ ದಿವಾಣಿ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಪಟ್ಟಣದ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ಲೋಕ್ ಅದಾಲತನಲ್ಲಿ ಮಾತನಾಡಿ, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಸಮಯ ಹಾಗೂ ಹಣವನ್ನು ಉಳಿಸಿ ಕೊಳ್ಳಬಹುದಾಗಿದೆ’ ಎಂದರು.
43 ಸಿವಿಲ್ ಪ್ರಕರಣಗಳು, 1620 ಅಪರಾಧ ಪ್ರಕರಣ, 23 ಬ್ಯಾಂಕ್ ಪ್ರಕರಣ, ಒಬ್ಬ ಮಹಿಳೆಗೆ ಉಪಜೀವನಾಂಶ, ಎರಡು ಜೋಡಿ ಪತಿ-ಪತ್ನಿ ಹೊಂದಾಣಿಕೆ ಹಾಗೂ 265 ಜನನ-ಮರಣ ಒಟ್ಟು 1954 ಪ್ರಕರಣಗಳನ್ನು ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು.
ಎಪಿಪಿ ಶುಭ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಬಾಗೋಜಿ, ಪ್ರಧಾನ ಕಾರ್ಯದರ್ಶಿ ಅನೀಲ ಕೌಜಲಗಿ ಮತ್ತು ಪದಾಧಿಕಾರಿಗಳು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.