ಬೆಳಗಾವಿ: ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಯಿ ಭುವನೇಶ್ವರಿ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪುತ್ಥಳಿಗಳ ಮೆರವಣಿಗೆ, ವೀರಗಾಸೆ ಕಲಾಪ್ರದರ್ಶನ, ಸುಮಾರು 250 ಜನ ನಿರಾಶ್ರಿತರಿಗೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತ ರಸಮಂಜರಿ
ಕಾರ್ಯ ಕ್ರಮಗಳನ್ನೊಳಗೊಂಡಂತೆ ಉಸಿರುಗನ್ನಡ ಕನ್ನಡ ಉತ್ಸವವನ್ನು ಇತ್ತೀಚೆಗೆ ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಗಳಾದ ಡಾ. ಅಲ್ಲಮಪ್ರಭು ಸ್ವಾಮಿಗಳು, ಬೆಳಗಾವಿ ಕರ್ನಾಟಕದ ಭಾಗವಾಗಿ ಉಳಿಯಲು, ಕನ್ನಡ ಗಟ್ಟಿಯಾಗಿ ನೆಲೆನಿಲ್ಲಲು ಕಾರಣ ನಾಗನೂರು ರುದ್ರಾಕ್ಷಿಮಠ ಹಾಗೂ ಡಾ. ಶಿವಬಸವ ಅಜ್ಜನವರು. ಹೀಗಾಗಿ ಬೆಳಗಾವಿ ಕರ್ನಾಟಕದ ಎರಡನೆಯ ರಾಜಧಾನಿ ಆಗಬೇಕು ಎಂಬುದು ಬೆಳಗಾವಿ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಕರ್ನಾಟಕ ಸರ್ಕಾರ ಕಚೇರಿಗಳ ಸ್ಥಳಾಂತರದ ಜೊತೆಗೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದರು.
ಗಡಿ ಪ್ರದೇಶಗಳು ಗಟ್ಟಿಯಾಗಿದ್ದಾರೆ ರಾಜ್ಯಗಳು ಸಂಪದ್ಭರಿತವಾಗಿರುತ್ತವೆ. ಗಡಿಗಳ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದರೆ ಈ ಕೆಲಸವನ್ನ ನಾಗನೂರು ರುದ್ರಾಕ್ಷಿಮಠವು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜೊತೆಗೂಡಿ ಮಾಡಬೇಕಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ ಚಂದರಗಿ ಅವರು ಮಾತನಾಡಿ, ನಾಗನೂರು ರುದ್ರಾಕ್ಷಿಮಠದ ಇನ್ನೊಂದು ಹೆಸರು ಕನ್ನಡ ಮಠ. ಶಿವಬಸವ ಅಜ್ಜನವರ 1960ರ ದಶಕದ ಕನ್ನಡ ಹೋರಾಟ, ಕನ್ನಡ ದಾಸೋಹ ಈಗಿನ ಯುವಪೀಳಿಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಶಿವಬಸವ ಸ್ವಾಮಿಗಳು, ಪ್ರಭು ಸ್ವಾಮಿಗಳು, ಜಗದ್ಗುರು ತೋಂಟದ ಸಿದ್ಧಾರಾಮ ಸ್ವಾಮಿಗಳು ಹಾಗೂ ಅಲ್ಲಮಪ್ರಭು ಸ್ವಾಮಿಗಳ ಜೊತೆಗೆ ನಿರಂತರವಾಗಿ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.