ಹುಬ್ಬಳ್ಳಿ: ಸರ್ಕಾರ ರಾಯಭಾರಿಗಳನ್ನಾಗಿ ನೇಮಿಸುವ ಮೊದಲು ಅವರ ಪೂರ್ವಾಪರಗಳನ್ನು ಸರಿಯಾಗಿ ವಿಚಾರ ಮಾಡಬೇಕು. ಹಿಂದಿನ ಸರ್ಕಾರ ದರ್ಶನ ಅವರನ್ನು ರಾಯಭಾರಿ ಮಾಡಿದ್ದು ತಪ್ಪು. ದರ್ಶನ್ ಈ ಹಿಂದೆಯೂ ಹಲ್ಲೆ ಮತ್ತಿತರ ಪ್ರಕರಣಗಳನ್ನು ಎದುರಿಸಿದವರು. ಇಷ್ಟೆಲ್ಲಾ ಆದಮೇಲೂ ಅವರನ್ನು ರಾಯಭಾರಿ ಮಾಡಿದ್ದು ತಪ್ಪು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವ್ಯಾಜ್ಯಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳು ಅತಿರೇಕದಿಂದ ವರ್ತಿಸುವುದನ್ನು ಚಿತ್ರರಂಗದ ನಾಯಕರು ನಿಯಂತ್ರಿಸಬೇಕು. ಚಿತ್ರನಟರನ್ನು, ಕ್ರೀಡಾಲೋಕದವರನ್ನು ಬಳಸಿಕೊಂಡು ಜಾಗೃತಿ ಮೂಡಿಸುವುದು ಒಳ್ಳೆಯದು. ಆದರೆ ಮಾಡುವ ಮೊದಲು ಅವರ ಬಗ್ಗೆ ಪೂರ್ಣ ಮಾಹಿತಿ, ಹಿನ್ನೆಲೆ ಗಮನಿಸಿ ಮಾಡಬೇಕು. ಎಲ್ಲವೂ ಗೊತ್ತಿದ್ದರೂ ದರ್ಶನ ಅವರನ್ನು ರಾಯಭಾರಿಯನ್ನಾಗಿ ಮಾಡಿದವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.