ಮುದ್ದೇಬಿಹಾಳ: ಮತಕ್ಷೇತ್ರದ ಅಭಿವೃದ್ಧಿ ಸೇರಿ ರಾಜ್ಯದ ಎಲ್ಲ ಹಿಂದುಳಿದ ಪ್ರದೇಶಗಳಿಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ. ಎಲ್ಲ ಹಿಂದುಳಿದ ಪ್ರದೇಶಗಳಿಗೆ ಸಮಾನವಾಗಿ, ಸಮತೋಲನ ಮಾಡಿ ಅಭಿವೃದ್ಧಿಗೆ ಮುಂದಾಗದಿದ್ದರೆ ನನಗೆ ರಾಜಕೀಯ ಮಾಡುವ ಇಚ್ಛೆ ಇಲ್ಲ.
ರಾಜಕೀಯ ತ್ಯಾಗಕ್ಕೂ ನಾನು ಸಿದ್ದನಾಗಿದ್ದೇನೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಬಿಜೆಎನ್ನೆಲ್ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ತ್ಯಾಗದ ಕುರಿತು ಬಿಚ್ಚು ಮನಸ್ಸಿನಿಂದ ಹೇಳುತ್ತಿದ್ದೇನೆ. ಸರ್ಕಾರ ಸ್ಪಂದಿಸಬೇಕು ಅನ್ನೋದು ನನ್ನ ಅಭಿಲಾಷೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಜಾರಿಗೂಳಿಸಬೇಕು ಅನ್ನೋದು ನನ್ನ ಬೇಡಿಕೆ. ಒಂದು ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟು ಭಾರಿ ಕೆಲಸ ಮಾಡಿದ್ದಾರೆಂದು ಮತ್ತು ಬೇರೆಯವರಿಗೆ ಕೇಳಿದಷ್ಟು ಅನುದಾನ ನೀಡದೆ ಮತಕ್ಷೇತ್ರದ ಜನರು ಅಭಿವೃದ್ಧಿ ವಂಚಿತರಾಗಿದ್ದಾರೆ ಎನ್ನಿಸಿಕೊಳ್ಳುವ ರಾಜಕೀಯ ನನಗೆ ಬೇಡ ಎನ್ನುವ ಸಂದೇಶವನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.