ಮೈಸೂರು, ಮೇ 21: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮಳೆ ಬಾರದೆ ಸಕಾಲದಲ್ಲಿ ತಂಬಾಕು ಕೃಷಿ ಆರಂಭಿಸಲು ಅಡಚಣೆ ಮಾಡಿದ ಮಳೆ ಇದೀಗ ಕಷ್ಟಪಟ್ಟು ಬೋರ್ ವೆಲ್ ನೀರಿನ ಮೂಲಕ ಬೆಳೆ ಬೆಳೆದ ಬೆಳೆಗಾರರಿಗೂ ಸಂಕಷ್ಟ ತಂದಿದೆ. ಕಾರಣ ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಜಮೀನಿಗೆ ನೀರು ನುಗ್ಗಿ ಕೃಷಿ ನೆಲಕಚ್ಚಿವೆ.
ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ತಂಬಾಕು ಕೃಷಿಗೆ ಮುಂದಾಗಿದ್ದ ಬೆಳೆಗಾರರು ಈಗ ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಹತ್ತು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆ ಕೃಷಿಗೆ ತೊಂದರೆ ನೀಡುತ್ತಿದೆ. ಕೆಲವು ಬೆಳೆಗಾರರು ಮಳೆ ಆರಂಭವಾದ ನಂತರ ತಂಬಾಕು ಗಿಡಗಳನ್ನು ನೆಡಲು ಆರಂಭಿಸಿದ್ದು ಇವು ಮಳೆಗೆ ಬಲಿಯಾಗುತ್ತಿವೆ.
ಇನ್ನು ಕೆಲವೆಡೆ ಈಗಾಗಲೇ ನೆಟ್ಟ ಗಿಡಗಳು ಬೆಳವಣಿಗೆ ಆರಂಭಿಸಿದ್ದು, ಮಳೆಯ ಆರ್ಭಟಕ್ಕೆ ನೀರು ತಗ್ಗು ಪ್ರದೇಶಕ್ಕೆ ನುಗ್ಗಿದ ಕಾರಣ ಕೃಷಿ ನೀರು ಪಾಲಾಗಿದೆ. ಹೀಗಾಗಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಸಾಮಾನ್ಯವಾಗಿ ಮಳೆಗಾಲದ ಆರಂಭದ ಹೊತ್ತಿಗೆ ತಂಬಾಕು ಗಿಡಗಳನ್ನು ನಾಟಿ ಮಾಡಿ ಮಳೆಗಾಲ ಕಳೆಯುತ್ತಿದ್ದಂತೆಯೇ ಸೊಪ್ಪನ್ನು ಹದಗೊಳಿಸಿ ಒಂದಷ್ಟು ಆದಾಯವನ್ನು ಕಂಡುಕೊಳ್ಳುತ್ತಿದ್ದ ಬೆಳೆಗಾರರು ಈಗ ತಲೆಕೆಡಿಸಿಕೊಳ್ಳುವಂತಾಗಿದೆ.