ಬೆಂಗಳೂರು, ಫೆ.23- ಪ್ಲಾಸ್ಟಿಕ್ ಗೋದಾಮಿನಲ್ಲಿ ಇಂದು ಮುಂಜಾನೆ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲೇ ಇದ್ದ ಪಾರ್ಕಿಂಗ್ ಸ್ಥಳಕ್ಕೆ ವ್ಯಾಪಿಸಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಸುಮಾರು 30ರಿಂದ 35 ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗೊಂಡನಹಳ್ಳಿಯ ಗೋದಾಮುವೊಂದರಲ್ಲಿ ಹಳೇ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಇದರ ಪಕ್ಕದಲ್ಲಿಯೇ ವಾಹನಗಳನ್ನು ರಾತ್ರಿ ವೇಳೆ ಪೇ- ಪಾರ್ಕಿಂಗ್ ಮಾಡಲಾಗುತ್ತಿತ್ತು. ಚಾಲಕರು ತಮ್ಮ ಮನೆಯ ಬಳಿ ವಾಹನಗಳನ್ನು ನಿಲ್ಲಿಸಲು ಜಾಗದ ಅಭಾವ ಇರುವ ಕಾರಣ ಈ ಸ್ಥಳದಲ್ಲಿ ದಿನಕ್ಕೆ 30 ರೂ. ನೀಡಿ ರಾತ್ರಿ ವೇಳೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು.
ನಿನ್ನೆ ಈ ಸ್ಥಳದಲ್ಲಿ ಸುಮಾರು 30-35 ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಇಂದು ಮುಂಜಾನೆ 1.30ರ ಸುಮಾರಿನಲ್ಲಿ ಈ ಪ್ಲಾಸ್ಟಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆ ಪಾರ್ಕಿಂಗ್ ಸ್ಥಳದಲ್ಲಿದ್ದ ಪ್ರಯಾಣಿಕರ ಆಟೋಗಳು, ಗೂಡ್ಸ್ವಾಹನ, ವ್ಯಾನ್ಗೂ ವ್ಯಾಪಿಸಿದ್ದರಿಂದ ನೋಡನೋಡುತ್ತಿದ್ದಂತೆ ಎಲ್ಲಾ ವಾಹನಗಳು ಹೊತ್ತಿ ಉರಿಯುತ್ತಿದ್ದವು.