ಗದಗ, ಫ್ರಬವರಿ 13: ಮರಳು ದಂಧೆಗೆ (Illegal Sand Mining) ಕಾಂಗ್ರೆಸ್ (Congress) ಮುಖಂಡ ಡಾ. ಶಶಿಧರ್ ಹಟ್ಟಿ (Dr Shashidhar Hatti) ಬಲಿಯಾಗಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಶಶಿಧರ್ ಡೆತ್ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಲುಂಗಿಯಿಂದ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಎಲ್ಲಾ ಲೆಕ್ಕ ಕೊಟ್ಟರೂ ಶರಣಗೌಡ ಪದೇಪದೇ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಮನನೋಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಉಸ್ತುವಾರಿ ಸಚಿವ ಹೆಚ್ಕೆ ಪಾಟೀಲರಿಗೆ ಹೇಳಿ ಶರಣಗೌಡಗೆ ಕಠಿಣ ಶಿಕ್ಷೆ ಕೊಡಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹೇಳಿ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ಇತ್ತೀಚೆಗೆ ‘ಟಿವಿ9’ ವಿಸ್ತೃತ ವರದಿ ಪ್ರಕಟಿಸಿತ್ತು. ಕಾನೂನು ಸಚಿವರ ತವರಲ್ಲೇ ಕಾನೂನು ಮಂಗಮಾಯವಾಗಿರುವ ಬಗ್ಗೆ ಮತ್ತು ತುಂಗಭದ್ರಾ ನದಿಯಲ್ಲಿ ಅಪಾಯಕಾರಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ತುಂಗಭದ್ರಾ ನದಿ ಪಾತ್ರದಲ್ಲಿ ಯಾವುದೇ ಮರಳು ಟೆಂಡರ್ ಇಲ್ಲ. ಮರಳು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ನದಿ ಒಡಲು ಬಗೆದು ಮರಳು ಬಾಚುತ್ತಿದ್ದಾರೆ. ಸಿಂಗಟಾಲೂರ, ಶೀರನಹಳ್ಳಿ, ಹೆಸರೂರ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಸಾಗುತ್ತಿರುವ ಬಗ್ಗೆಯೂ ವರದಿ ಪ್ರಕಟಿಸಲಾಗಿತ್ತು