ಚಾಮರಾಜನಗರ: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಭಾಗಿಯಾಗಿ ಸಿ.ಎಂಗೆ ಮನವಿ ಸಲ್ಲಿಸಿದರು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ ನೇತೃತ್ವದಲ್ಲಿ ಜನಸ್ಪಂದನದಲ್ಲಿ ಭಾಗಿಯಾದ ಸಂತ್ರಸ್ತರು, ‘ಕಾಯಂ ಸರ್ಕಾರಿ ನೌಕರಿಯನ್ನು ನೀಡಬೇಕು’ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ತಾತ್ಕಾಲಿಕ ಕೆಲಸ ನೀಡಲಾಗಿದೆ. ಅದನ್ನು 12-14 ಮಂದಿಯಷ್ಟೇ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ’ ಎಂದು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈಗ ತಾತ್ಕಾಲಿಕ ಹುದ್ದೆಯಲ್ಲಿ ಕೆಲಸ ಮಾಡಿ. ಮುಂದಿನ ದಿನಗಳಲ್ಲಿ ಕಾಯಂ ನೌಕರಿ ನೀಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ಸುನೀತಾ ಎಂಬುವವರು ಮಾತನಾಡಿ, ‘ನೀವು ಈ ಹಿಂದೆ 36 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಿರಿ. ಆದರೆ ಈಗ 32 ಜನರ ಕುಟುಂಬಗಳಿಗೆ ಮಾತ್ರ ಕೆಲಸ ನೀಡಲು ಮುಂದಾಗಿದ್ದೀರಿ. ನಮ್ಮ ಹೆಸರುಗಳನ್ನು ಕೈಬಿಡಲಾಗಿದೆ’ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.