ಬೆಂಗಳೂರು: ಸಿದ್ದರಾಮಯ್ಯನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರ ಬಗ್ಗೆ ಏಕವಚನ ಪದ ಬಳಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ವೀಡಿಯೋ ಹಂಚಿಕೊಂಡು ಜೋಶಿ ಕೆಂಡಕಾರಿದ್ದಾರೆ.
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ ನಂತರ ಈಗ ನಿಮ್ಮ ಸರಧಿ…. ಅಷ್ಟೇ ಅಲ್ಲ, ಕೆಲವೇ ದಿನಗಳ ಹಿಂದೆ ನಿಮ್ಮ ಮೈತ್ರಿಯ ಪಟಾಲಂ ಉಪರಾಷ್ಟ್ರಪತಿಗಳನ್ನು ಸಂಸತ್ ಆವರಣದಲ್ಲೇ ಅಪಹಾಸ್ಯ ಮಾಡಿ ಕಲಾಪದಿಂದ ಬಹಿಷ್ಕರಿಸಲಾಗಿತ್ತು. ನೀವು ದೇಶದ ಪ್ರಧಾನಿಗೆ ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಈಗ ದೇಶದ ರಾಷ್ಟ್ರಪತಿಗಳಿಗೆ ಏಕವಚನದಲ್ಲಿ ಬಹಿರಂಗವಾಗಿ ಒಂದು ಸಭೆಯಲ್ಲಿಯೇ ಮಾತನಾಡುತ್ತೀರಿ. ಇದೇನಾ ನಿಮ್ಮ ಸಂಸ್ಕೃತಿ? ಇದಾ ನಿಮ್ಮ ಸಭ್ಯತೆ ಎಂದು ಪ್ರಶ್ನಿಸಿದ್ದಾರೆ.