ಹಾಸನ: ಕಾಡಾನೆ ದಾಳಿಯಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟ ಹಿನ್ನೆಲೆ ಅರ್ಜುನನ ಸಮಾಧಿಗೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹಾಗೂ ಧರ್ಮಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಆಗಮಿಸಿ ನಮಸ್ಕರಿಸಿದರು.
ಹಾಸನದ ಸಕಲೇಶಪುರದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಬಲಿಷ್ಠವಾದ ಒಂಟಿ ಸಲಗದ ದಾಳಿಗೆ ಅರ್ಜುನ ಗಾಯಗೊಂಡು ಸಾವನ್ನಪ್ಪಿದ್ದ. ಮೃತ ಕ್ಯಾಪ್ಟನ್ ಅರ್ಜುನನ್ನು ಹಾಸನದ ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಲಾಗಿತ್ತು. ಇಂದು ಹಾಸನಕ್ಕೆ ಆಗಮಿಸಿ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ 8 ಬಾರಿ ಮೈಸೂರು ಅಂಬಾರಿ ಹೊತ್ತ ಅರ್ಜುನ ಸಮಾಧಿಗೆ ಕೈಮುಗಿದು ನಮಸ್ಕರಿಸಿದರು.
ಫೇಸ್ಬುಕ್ ಮೂಲಕ ಬೇಸರ ವ್ಯಕ್ತಪಡಿಸಿರುವ ಒಡೆಯರ್: ಅರ್ಜುನನ ಸಾವಿನ ಕುರಿತು ಮಹಾರಾಜ ಯದುವೀರ್ ಒಡೆಯರ್ ‘ಮೈಸೂರು ದಸರಾ ಮಹೋತ್ಸವದಲ್ಲಿ 8 ಭಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ಅತೀವ ದುಃಖವನ್ನುಂಟು ಮಾಡಿದೆ. ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇಂದು ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವನ ಸದ್ಗತಿಗಾಗಿ ಪ್ರಾರ್ಥಿಸಲಾಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.