ಹುಬ್ಬಳ್ಳಿ : ಮುಸ್ಲಿಂರ ಹಿತರಕ್ಷಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ.
ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂತಹ ವಿಚಾರ ದೊಡ್ಡದು ಮಾಡುವಂತದ್ದಲ್ಲವೇ ಅಲ್ಲ. ನನಗೆ ಅರ್ಥನೇ ಆಗ್ತಿಲ್ಲ. ಅವರು ಹೇಳಿದ ಹೇಳಿಕೆಯನ್ನು ನಾನು ನೋಡಿದ್ದೀನಿ. ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಹೇಳಿದ್ದಾರೆ. ಬೇರೆ ಬೇರೆ ಸಮಾಜಕ್ಕೆ ಹೋದಾಗ ಅವರವರ ಹಿತರಕ್ಷಣೆ ಮಾಡುತ್ತೀನಿ ಅಂತ ಹೇಳೋದು ಸಹಜ. ಇಲ್ಲ ನಿಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಅಂತ ಹೇಳ್ತಾರೇನು? ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಅದನ್ನು ಬಿಟ್ಟು ಬಿಡಿ, ಸಿದ್ದರಾಮಯ್ಯ ಅವರೇ ಸಮರ್ಥರಿದ್ದಾರೆ. ಅವರೇ ಅದರಲ್ಲಿ ಉತ್ತರ ಕೊಡ್ತಾರೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಆಗಲೇಬೇಕು. ವಿರೋಧ ಪಕ್ಷದವರ ಮೇಲೆ ಕೂಡ ಸಾಕಷ್ಟು ಜವಾಬ್ದಾರಿ ಇದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ಧ್ವನಿ ಎತ್ತಿದರೆ ಖಂಡಿತವಾಗಿ ಚರ್ಚೆ ಆಗುತ್ತದೆ. ಉತ್ತರ ಕರ್ನಾಟಕ ಅಭಿವೃದ್ಧಿ ಅಂತ ಬಂದರೆ ಮಹದಾಯಿ, ಕಳಸ ಬಂಡೂರಿ ಸೇರಿ ಎಲ್ಲ ವಿಷಯಗಳು ಒಳಗೊಳ್ಳುತ್ತವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ನಂತರ ಯತ್ನಾಳ್ ಅಸಮಾಧಾನ ವಿಚಾರ, ಅವರವರೇ ಅದರ ಬಗ್ಗೆ ಮಾತನಾಡಬೇಕು. ನಾನು ಅದರ ಬಗ್ಗೆ ಏನು ಮಾತನಾಡಲಿ? ನಾನು ಹಿಂದೆನೇ ಸಾಕಷ್ಟು ಬಾರಿ ಹೇಳಿದ್ದೇನೆ. ಪದೇ ಪದೆ ಹೇಳುವುದರಲ್ಲಿ ಅರ್ಥವಿಲ್ಲ ಎಂದರು.