ಬೆಂಗಳೂರು: ದರೋಡೆಕೋರರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ನಿಂತಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಬೆಳಿಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ತನಿಖೆಗಾಗಿ ಸಿಬಿಐಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಈ ಸರ್ಕಾರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಬಹಳ ಇದೆ. ಚರ್ಚೆ ಮಾಡೋಣ, ಇದರ ಬಗ್ಗೆ ಆತುರ ಬೇಡ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತು ಬೇಡ ಎಂದರು.
ಮರ್ಯಾದೆ ಇರುವವರು ಹೆದರುತ್ತಾರೆ, ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿದ್ದರೆ ಏನು, ಯಾವುದರಲ್ಲಿದ್ದರೆ ಏನು?. ಯಾವುದನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ದುರಂಹಕಾರದಲ್ಲಿರುವವರಿಗೆ ಏನು ಹೇಳುವುದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.