ಗಂಗಾವತಿ(ಕೊಪ್ಪಳ): ಕಾಯಕದ ಮೂಲಕವೇ ಕೈಲಾಸ ಕಾಣಬೇಕು ಎಂದು ಆದರ್ಶ ನೀಡಿದ ಬಸವಣ್ಣನವರ ತತ್ವಾದರ್ಶಗಳಿಗೆ ವಿರುದ್ಧವಾಗಿ ಇಂದು ಉಚಿತ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಪರವಾಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಉಚಿತ ಭಾಗ್ಯಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ವ್ಯಕ್ತಿ ಸೋಮಾರಿಯಾಗಬಾರದು ಎಂಬ ಉದ್ದೇಶಕ್ಕೆ ಕಾಯಕದ ಮೂಲಕ ಕೈಲಾಸ ಕಾಣಬೇಕು. ವ್ಯಕ್ತಿ ತನ್ನನ್ನು ತಾನು ಕಾಯಕದಲ್ಲಿ ತೊಡಗಿಸಿಕೊಂಡರೆ ದೇಹ ಮತ್ತು ಬುದ್ಧಿ ಎರಡೂ ಶುದ್ಧವಾಗಿರುತ್ತವೆ. ಅಲ್ಲದೇ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬ ಹಿನ್ನೆಲೆ ಬಸವಣ್ಣ ಕಾಯಕದ ಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿದ್ದರು ಎಂದರು.
ಆದರೆ ಇಂದು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಜನರನ್ನು ಪರವಾಲಂಬಿಯನ್ನಾಗಿ ಮಾಡುವ ಕೆಲಸ ಸಮಾಜದಲ್ಲಿ ನಡೆಯುತ್ತಿದೆ. ಇದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಾರಕವಾಗಲಿದೆ ಎಂದು ಸಂಸದ ಕಳವಳ ವ್ಯಕ್ತಪಡಿಸಿದರು. ಇಡೀ ಸಮುದಾಯಕ್ಕೆ ಅನ್ನ, ಅಕ್ಷರ, ಆರ್ಥಿಕ ಮತ್ತು ಆಧ್ಯಾತ್ಮಿಕ ಪರಿಕಲ್ಪನೆ ನೀಡಿರುವ ವೀರಶೈವ ಸಮಾಜವು, ಇತರ ಸಮುದಾಯಗಳನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತದೆ ಎಂದರು.
ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುವಂತೆ ನಮ್ಮ ಲಿಂಗಾಯತ ಸಮಾಜವೂ ಒಳಪಂಗಡಗಳು ನೂರಿದ್ದರೂ ವಿವಿಧತೆಯಲ್ಲಿ ಏಕತೆ ಕಾಣಬೇಕಿದೆ. ಲಿಂಗವನ್ನು ಧರಿಸಿಕೊಂಡು ಲಿಂಗಾಯತ ಸಮಾಜಕ್ಕೆ ಬಂದಂತ ಇತರರನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಗೌರವಿಸಬೇಕಿದೆ. ಇದರಿಂದ ಮಾತ್ರ ಸಮಾನತೆ ಸಾಧ್ಯ. ಸಮಾನತೆ ಎಂಬುದು ಲಿಂಗಾಯತ ಸಮಾಜಕ್ಕೆ ಯಾರೂ ಹೇಳಿಕೊಡಬೇಕಿಲ್ಲ ಎಂದು ಸಂಸದರು ಹೇಳಿದರು.