ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕು ಎಂದು ನಟ ಡಾ.ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಷ್ಟಕಾಲದ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಾತುಕತೆಗೆ ಮುಂದಾಗಬೇಕು. ಎರಡೂ ಸರ್ಕಾರಗಳ ಜತೆ ಮಾತನಾಡಿದರೆ ಸಂಕಷ್ಟ ಬಗೆಹರಿಯಲಿದೆ ಎಂದರು.
ಕಾವೇರಿ ವಿಚಾರದಲ್ಲಿ ರೈತರ ಪರ ಸದಾಕಾಲ ನಿಲ್ಲುತ್ತೇವೆ. ಹೋರಾಟದ ಮೂಲಕ ಆಳುವ ಸರ್ಕಾರದ ಮೇಲೆ ಒತ್ತಡ ತರಬೇಕು. ಯಾವ ರೀತಿ ಒತ್ತಡ ತರಬೇಕು ಎಂಬುದರ ಬಗ್ಗೆ ಎಲ್ಲರೂ ಕುಳಿತು ತೀರ್ಮಾನ ಮಾಡಿದರೆ ಒಳ್ಳೆಯದು. ಕನ್ನಡಿಗರ ಹೋರಾಟ ದೊಡ್ಡ ಮಟ್ಟದ್ದಾಗಿರಬೇಕು. ಬೆಂಕಿ ಹಚ್ಚಿ ಆಕ್ರೋಶ ಮಾಡುವುದಲ್ಲ. ಎಲ್ಲರಿಗೂ ಕಿಚ್ಚು ಇರುತ್ತೆ, ತಾಳ್ಮೆಯಿಂದ ಹೋರಾಟ ಮಾಡಬೇಕು. ನಾನೊಬ್ಬ ಕಲಾವಿದ, ಹಿರಿಯರೆಲ್ಲ ಒಗ್ಗೂಡಿ ರೈತರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿದರು.