Breaking News

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಸಂತ್ರಸ್ತೆಯ ಕಡೆಯವರಿಗೆ ತಿಳಿಸಬೇಕು: ಹೈಕೋರ್ಟ್

Spread the love

ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ದಾಖಲಾದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸಮಯದಲ್ಲಿ ಸಂತ್ರಸ್ತರು ಬದುಕುಳಿದಿದ್ದರೆ ಅವರಿಗೆ ಅಥವಾ ದೂರುದಾರರಿಗೆ ವಿಚಾರಣೆಯ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಪೋಕ್ಸೋ ಪ್ರಕರಣಗಳಲ್ಲಿನ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಗಳು ಪಾಲಿಸಬೇಕಾದ ನಿಯಮಗಳ ಕುರಿತು ಹಲವು ನಿರ್ದೇಶನಗಳನ್ನು ನೀಡಿದೆ.

ಪ್ರಕರಣವೇನು? ಪ್ರಕರಣದ ಸಂತ್ರಸ್ತೆಗೆ ಸದ್ಯ 24 ವರ್ಷ. 2014ರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸಂತ್ರಸ್ತೆಯನ್ನು ಆರೋಪಿ ಪ್ರೀತಿಸುತ್ತಿದ್ದ ಹಾಗೂ ಆಗಾಗ ಆಕೆಯ ಮನೆಗೆ ಹೋಗುತ್ತಿದ್ದ. ಅಪ್ರಾಪ್ತೆಯಾಗಿದ್ದರಿಂದ ಪ್ರೀತಿಯ ಪ್ರಸ್ತಾವನೆಗೆ ಸಂತ್ರಸ್ತೆ ಒಪ್ಪಿರಲಿಲ್ಲ. ಈ ನಡುವೆ ಆಕೆಯನ್ನು ಪ್ರವಾಸಿ ತಾಣಕ್ಕೆ ಕರೆದೊಯ್ದು, ನಿರ್ಜನ ಜಾಗದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2017ರಲ್ಲಿ ಪೋಷಕರು ಊರಿಗೆ ಹೋಗಿದ್ದ ವೇಳೆ ಸಂತ್ರಸ್ತೆ ಮನೆಗೆ ರಾತ್ರಿ ಸಮಯದಲ್ಲಿ ಭೇಟಿ ನೀಡಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದು ಹಲವು ಬಾರಿ ಪುನರಾವರ್ತನೆಯಾಗಿತ್ತು.

2020ರಲ್ಲಿ ಸಂತ್ರಸ್ತೆ ಗರ್ಭೀಣಿಯಾಗಿದ್ದಾಗ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದ. ಈ ಮಧ್ಯೆ 2021ರಲ್ಲಿ ಸಂತ್ರಸ್ತೆ ಮತ್ತು ಆರೋಪಿಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆದರೆ, ತನ್ನ ಪೋಷಕರಿಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದ ಆರೋಪಿ, ಸ್ನೇಹಿತರನ್ನು ಸಂತ್ರಸ್ತೆ ಮನೆಗೆ ಕಳುಹಿಸಿ ಮದುವೆಯಾದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿಸಿದ್ದ. ಈ ಕುರಿತು 2022ರಲ್ಲಿ ಸಂತ್ರಸ್ತೆ ದೂರು ನೀಡಿದ್ದರು.

ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ 2022ರ ಡಿ.30ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಸಂತ್ರಸ್ತೆ, ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಕುರಿತ ಮಾಹಿತಿ ನಮಗೆ ನೀಡಿಲ್ಲ. ನಮ್ಮ ವಾದ ಆಲಿಸದೇ ಜಾಮೀನು ನೀಡಲಾಗಿದೆ ಎಂದು ಆಕ್ಷೇಪಿಸಿದ್ದರು. ಇದೀಗ ಹೈಕೋರ್ಟ್‌, ಆರೋಪಿಗೆ ಜಾಮೀನು ಮಂಜೂರು ಆದೇಶ ರದ್ದುಪಡಿಸಿದೆ. ಜೊತೆಗೆ, ಸಂತ್ರಸ್ತೆ ವಾದ ಆಲಿಸಿ ಮೆರಿಟ್‌ ಆಧಾರದ ಮೇಲೆ ಆರೋಪಿ ಜಾಮೀನು ಅರ್ಜಿ ಇತ್ಯರ್ಥಪಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

ನಿರ್ದೇಶನಗಳು: ಪೋಕ್ಸೋ ಪ್ರಕಣದ ಯಾವುದೇ ಆರೋಪಿ ಸಾಮಾನ್ಯ ಅಥವಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಅರ್ಜಿ ಮತ್ತು ಅದರ ವಿಚಾರಣಾ ದಿನಾಂಕದ ಮಾಹಿತಿಯನ್ನು ಸಂತ್ರಸ್ತರು ಅಥವಾ ದೂರುದಾರರಿಗೆ ನ್ಯಾಯಾಲಯದ ರಿಜಸ್ಟ್ರಿ ಒದಗಿಸಬೇಕು. ಆರೋಪಿ ಮಧ್ಯಂತರ ಜಾಮೀನು ಕೋರಿದ್ದರೆ, ಅಂತಹ ಸಮಯದಲ್ಲಿ ನ್ಯಾಯಾಲಯ ಕಾರಣ ನಮೂದಿಸಿ ಸೂಕ್ತ ಆದೇಶ ಹೊರಡಿಸಬಹುದು. ಒಂದೊಮ್ಮೆ ಮಾಹಿತಿದಾರರು/ಸಂತ್ರಸ್ತರು ದೊರಕದೇ ಇದ್ದಾಗ, ಆ ಕಾರಣಗಳನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್‌ (ಸರ್ಕಾರ) ವಸ್ತು ಸ್ಥಿತಿ ವರದಿ ಸಲ್ಲಿಸಬೇಕು. ಅದನ್ನು ಪರಿಗಣಿಸಿ ನ್ಯಾಯಾಲಯ ಸೂಕ್ತ ಆದೇಶ ಮಾಡಬಹುದು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಜೊತೆಗೆ,‌ ಮಾಹಿತಿ ನೀಡಿದ ನಂತರವೂ ಮಾಹಿತಿದಾರರು/ಸಂತ್ರಸ್ತರು ವಿಚಾರಣೆಯಲ್ಲಿ ಭಾಗವಹಿಸದಿದ್ದರೆ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ಮೆರಿಟ್‌ ಆಧಾರದ ಮೇಲೆ ನಿರ್ಧರಿಸಬಹುದು. ಮಾಹಿತಿದಾರರು/ಸಂತ್ರಸ್ತರಿಗೆ ಅಪ್ರಾಪ್ತರಾಗಿದ್ದರೆ, ಅವರನ್ನು ವಿಚಾರಣಾ ಪ್ರಕ್ರಿಯೆಯಲ್ಲಿ ಪಕ್ಷಗಾರರನ್ನಾಗಿ ಮಾಡಬಾರದು. ಅಪ್ರಾಪ್ತ ಮಾಹಿತಿದಾರ/ಸಂತ್ರಸ್ತೆಗೆ ನೊಟೀಸ್‌ ನೀಡುವಂತಿಲ್ಲ. ಅವರ ಪೋಷಕರಿಗೆ, ಪಾಲಕರಿಗೆ ನೊಟೀಸ್‌ ನೀಡಬೇಕು. ಆರೋಪಿ ಜಾಮೀನು ಅರ್ಜಿಯಲ್ಲಿ ಸಂತ್ರಸ್ತರು/ಮಾಹಿತಿದಾರರನ್ನು ಪ್ರತಿವಾದಿ ಮಾಡದಿದ್ದರೆ ಆಗ ಅವರಿಗೆ ನೊಟೀಸ್‌ ತಲುಪಿಸಲು ಕೋರ್ಟ್‌ ರಿಜಿಸ್ಟ್ರಿ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತೆಯ ವಾದ ಆಲಿಸಿದ ನಂತರವೇ ಜಾಮೀನು ಅರ್ಜಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಸೂಚಿಸಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ