ಕೊಪ್ಪಳ: ಆಟವಾಡುತಿದ್ದ 3.5 ವರ್ಷದ ಮಗು ಮನೆಯ ಮೊದಲನೇ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಗೌರಿ ನಗರದ ಮಹಡಿ ಮನೆಯೊಂದರಲ್ಲಿ ಶನಿವಾರ (7/10/2023) ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಪಟ್ಟಣದ ದುರ್ಗಾ ಕಾಲೋನಿಯ ನಿವಾಸಿ ಸಂಗೀತ ಕಲಾವಿದ ಹೊಳಿಯಪ್ಪ ಗುರಿಕಾರ ಅವರು, ತಮ್ಮ ಮಗಳು ಸೇರಿದಂತೆ ಕುಟುಂಬ ಸಮೇತ ಗೌರಿ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಸೀರೆ ಕಾರ್ಯಕ್ರಮ ಇರುವ ಕಾರಣ ತೆರಳಿದ್ದರು. ಕಾರ್ಯಕ್ರಮದ ಸಂಭ್ರಮದಲ್ಲಿ ಬಂಧು-ಬಳಗದವರೊಂದಿಗೆ ಭಾಗಿಯಾಗಿದ್ದು, ರಾತ್ರಿ ಮಹಡಿ ಮನೆಯ ಮೇಲೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.
ಆ ಸಮಯದಲ್ಲಿ 3.5 ವರ್ಷದ ಮಗುವೊಂದು ಎಲ್ಲರೂ ಕುಳಿತುಕೊಳ್ಳಲು ಇರಿಸಿದ್ದ ಕುರ್ಚಿ ಮೇಲೆ ನಿಂತು ಕೆಳಗಡೆ ಇಣುಕಿದ್ದಾಳೆ. ಆ ಸಂದರ್ಭದಲ್ಲಿ ಆಯತಪ್ಪಿ ಸುಮಾರು 20 ಅಡಿ ಎತ್ತರದಿಂದ ಕೆಳಗಡೆ ಬಿದ್ದಿದ್ದಾಳೆ. ಬೀಳುವ ರಭಸದಲ್ಲಿ ಗಿಡದ ಟೊಂಗೆಯೊಂದು ಹೊಟ್ಟೆಗೆ ಸಿಕ್ಕಿದ ಪರಿಣಾಮ ಮಗುವಿಗೆ ಗಂಭೀರವಾದ ಗಾಯಗಳಾಗಿವೆ.
ತಕ್ಷಣ ಮಗುವನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ ಪಾಲಕರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಜೀವನ್ಮರಣದ ಹೋರಾಟದಲ್ಲಿದೆ. ಈ ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಘಟನೆ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದಿದ್ದಾರೆ.