Breaking News

ವೈಭವದ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ

Spread the love

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಇಂದು ಮರಳು ಮೂಟೆ ಹೊರಿಸುವ ಮೂಲಕ ಭಾರ ಹೊರುವ ತಾಲೀಮನ್ನು ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಆರಂಭಿಸಲಾಯಿತು.

ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಮಧ್ಯಾಹ್ನ 12:30 ರಿಂದ 1 ಗಂಟೆಯ ಒಳಗಿನ ಶುಭ ಮುಹೂರ್ತದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ನಂತರ 1 ಗಂಟೆಯಿಂದ 1:45 ರವರೆಗೆ ಗೋಣಿಚೀಲದಲ್ಲಿ ನಿರ್ಮಾಣವಾದ ಗಾದಿನಮ್ದ ಕಟ್ಟಿ, ಅದರ ಮೇಲೆ ಮರಳು ಮೂಟೆ ಇರಿಸಿ, ತಾಲೀಮು ನಡೆಸಿದರು.

ಗಜಪಡೆಯ ನಾಯಕ ಅಭಿಮನ್ಯು ಭಾರ ಹೊತ್ತು ಅರಮನೆಯ ಮುಂಭಾಗದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಹೆಜ್ಜೆ ಹಾಕಿತು. ಆನೆಯ ಎಡ, ಬಲಭಾಗದಲ್ಲಿ ಕುಮ್ಕಿ ಆನೆಗಳಾದ ವರಲಕ್ಷ್ಮಿ ಹಾಗೂ ವಿಜಯ ಆನೆಗಳು ಒಟ್ಟಿಗೆ ಸಾಗಿದವು. ಅರಮನೆಯ ಬಲರಾಮ ದ್ವಾರದ ಮೂಲಕ ಜಂಬೂಸವಾರಿ ಸಾಗುವ ಮಾರ್ಗದಲ್ಲಿ 9 ಗಜಪಡೆಗಳಾದ ಅರ್ಜುನ, ಧನಂಜಯ, ಭೀಮ, ಗೋಪಿ, ಕಂಜನ್ ಹಾಗೂ ಮಹೇಂದ್ರ ಆನೆಗಳು ಸಾಗಿದವು. ಇವು ಬನ್ನಿ ಮಂಟಪದವರೆಗೆ ಸಾಗಿ ವಾಪಸ್ ಆಗಲಿದ್ದು, ಮೊದಲ ಬಾರಿಗೆ ಮಧ್ಯಾಹ್ನದ ವೇಳೆ ಭಾರ ಹೊರುವ ತಾಲೀಮು ಆರಂಭಿಸಿದ್ದು ವಿಶೇಷವಾಗಿತ್ತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿಕೆ: ದಸರಾ ಮಹೋತ್ಸವಕ್ಕೆ ಭಾಗವಹಿಸಲು ಆಗಮಿಸಿರುವ ಗಜಪಡೆಗೆ ಇಂದಿನಿಂದ ಭಾರ ಹೊರುವ ತಾಲೀಮು ಶುರು ಮಾಡಲಾಗಿದೆ. ಇಲ್ಲಿಯವರೆಗೆ ಹತ್ತು ದಿನಗಳ ಕಾಲ ಬರೀ ತಾಲೀಮು ನಡೆಸಲಾಗುತ್ತಿತ್ತು. ಇಂದಿನಿಂದ ಅಭಿಮನ್ಯುವಿಗೆ ಮರಳಿನ ಚೀಲ, ಗೋಣಿಚೀಲದ ಗಾದಿ ಸೇರಿದಂತೆ ಇತರ ವಸ್ತುಗಳನ್ನೊಳಗಂಡ 600 ಕೆ.ಜಿ ತೂಕದ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಧನಂಜಯ, ಮಹೇಂದ್ರ, ಗೋಪಿ, ಭೀಮ ಸೇರಿ ನಾಲ್ಕು ಆನೆಗಳಿಗೂ ಕೂಡ ಭಾರ ಹೊರುವ ತಾಲೀಮು ಮಾಡುತ್ತೇವೆ. ಮೊದಲ ದಿನ 600 ಕೆಜಿ, ಮುಂದಿನ ದಿನಗಳಲ್ಲಿ ಹೆಚ್ಚಿನ ತೂಕ ಹಾಕಲಾಗುತ್ತದೆ. ಅಕ್ಟೋಬರ್​ನಲ್ಲಿ ಜಂಬೂಸವಾರಿಯ ದಿನ ಹತ್ತಿರ ಬರುತ್ತಿದ್ದಂತೆ 1,200 ಕೆಜಿ ತೂಕ ಹೊರಿಸುವ ಮೂಲಕ ಜಂಬೂಸವಾರಿಗೆ ಗಜಪಡೆಯನ್ನು ಸಿದ್ದ ಮಾಡಲಾಗುತ್ತದೆ ಎಂದರು.

ಸೆಪ್ಟೆಂಬರ್‌ 25ಕ್ಕೆ 2ನೇ ಹಂತದ ಗಜಪಡೆ: ಸೆಪ್ಟೆಂಬರ್ 25ಕ್ಕೆ ಎರಡನೇ ಹಂತದ 5 ಗಜಪಡೆ ಅರಮನೆಗೆ ಆಗಮಿಸಲಿದ್ದು, ಎರಡನೇ ಹಂತದಲ್ಲಿ ಈ ಬಾರಿ ದಸರಾಗೆ ಮೂರು ಹೊಸ ಆನೆಗಳು ಬರುತ್ತಿವೆ. ರಾಂಪುರ ಶಿಬಿರದಿಂದ ರೋಹಿತ್ ಮತ್ತು ಹಿರಣ್ಯ ಆಗಮಿಸುತ್ತಿದ್ದು, ದೊಡ್ಡ ಹರವೆ ಶಿಬಿರದಿಂದ ಲಕ್ಷ್ಮಿ ಆಗಮಿಸುತ್ತಿವೆ. ಈ ಮೂರು ಆನೆಗಳು ಈ ಬಾರಿ ದಸರಾಗೆ ಹೊಸ ಆನೆಗಳಾಗಿವೆ. ದುಬಾರೆ ಆನೆ ಶಿಬಿರದಿಂದ ಸುಗ್ರೀವ ಮತ್ತು ಪ್ರಶಾಂತ ಆನೆಗಳು ಸೆಪ್ಟೆಂಬರ್ 25ಕ್ಕೆ ಅರಮನೆಗೆ ಆಗಮಿಸಲಿವೆ. ಅಂದು ಮೊದಲ ಹಂತದಲ್ಲಿ ಆಗಮಿಸುವ 9 ಗಜಪಡೆಗಳನ್ನು ಸೇರಿಕೊಳ್ಳಲಿವೆ. ಆ ಮೂಲಕ ಸೆಪ್ಟೆಂಬರ್ 26 ರಿಂದ 14 ಗಜಪಡೆಗಳು ಒಟ್ಟಿಗೆ ತಾಲೀಮು ಆರಂಭಿಸಲಿವೆ


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ