ಇದೀಗ ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸ ಮುಗಿಸಿಕೊಂಡು ಬಂದಿರುವ ಕುಮಾರಸ್ವಾಮಿ ಕಳೆದ ತಡರಾತ್ರಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುದ್ದಿಗಾರರ ಜೊತೆ ಮಾತನಾಡಿ, ಮೊನ್ನೆ ಒಂದು ಇಲಾಖೆಯಲ್ಲಿ ಒಬ್ಬರು ಮಂತ್ರಿ ಗುತ್ತಿಗೆದಾರರಿಂದ ಪರ್ಸೆಂಟೇಜ್ ಇಷ್ಟೆಂದು ಕೇಳಿದರು ಎಂದು ನಾನು ಯುರೋಪ್ ಪ್ರವಾಸದಲ್ಲಿದ್ದಾಗ ನನಗೆ ಮಾಹಿತಿ ಸಿಕ್ಕಿತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಗುತ್ತಿಗೆದಾರರಿಗೆ ಮಂತ್ರಿಗಳಿಗೆ ಕಮಿಷನ್ ಕೊಡುವಂತೆ ಬೇಡಿಕೆ ಇಡಲಾಗುತ್ತಿದೆ. ನನ್ನ ಯುರೋಪ್ ಪ್ರವಾಸದ ಸಮಯದಲ್ಲಿ ನನಗೆ ಸುಳಿವು ಸಿಕ್ಕಿತು. ಗುತ್ತಿಗೆದಾರರಿಗೆ ಬೆಂಗಳೂರಿನಲ್ಲಿ ಕಮಿಷನ್ ಕೊಡುವಂತೆ ಕೇಳಲಾಗಿದೆ.
ಮಂತ್ರಿಗಳು ಮತ್ತು ಅವರ ಚೇಲಾಗಳು ಗುತ್ತಿಗೆದಾರರಿಂದ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದರು. ನನಗೆ ಯುರೋಪ್ ಪ್ರವಾಸದಲ್ಲಿದ್ದಾಗಲೇ ಮಾಹಿತಿ ಬಂತು:ಮಂತ್ರಿಗಳ ಬಳಿ ಗುತ್ತಿಗೆದಾರರ ಸಂಘದವರು ಹೋದರೆ ಇಲಾಖೆಯ ಮಂತ್ರಿಗಳು ಎರಡು ಮೂರು ಏಜೆಂಟ್ ಗಳನ್ನು ಇಟ್ಟುಕೊಂಡಿದ್ದಾರೆ. ಹಣ ತಂದಿದ್ದರೆ ಒಳಗೆ ಬನ್ನಿ, ಇಲ್ಲದಿದ್ದರೆ ಹೊರಗೆ ಇರಿ ಎಂದು ಇಲಾಖೆಯಲ್ಲಿ ಮಂತ್ರಿಗಳ ಚೇಲಾಗಳು ಹೇಳುತ್ತಾರಂತೆ,… ಇದು ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದಂಧೆಗಳು, ಈ ರಾಜ್ಯದ ಜನತೆ ಇನ್ನೈದು ವರ್ಷಗಳಲ್ಲಿ ಇನ್ನೂ ಏನೇನು ಕೇಳಬೇಕೋ, ನೋಡಬೇಕೊ ಅನುಭವಿಸಬೇಕೋ ಗೊತ್ತಿಲ್ಲ.
ಇವರು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಭ್ರಷ್ಟಾಚಾರ ನಿಲ್ಲಿಸಿ ಪಾರದರ್ಶಕ ಆಡಳಿತ ತರುತ್ತಾರೆಯೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.